ಭೂಕುಸಿತದಿಂದ ಸಿಕ್ಕಿಹಾಕಿಕೊಂಡ ಹಿಮಾಚಲ ಸಿಎಂ ವೀರಭದ್ರ ಸಿಂಗ್


 ಉತ್ತರ ಭಾರತದಾದ್ಯಂತ ಭಾರಿ ಮಳೆಯಾಗುತ್ತಿದೆ. ಅವಧಿಗಿಂತ ಮುಂಚಿತವಾಗಿಯೇ ಕಾಲಿಟ್ಟಿರುವ ಕುಂಭ-ದ್ರೋಣ ಮಳೆಗೆ ಕನಿಷ್ಠ 60 ಮಂದಿ ಅಸುನೀಗಿದ್ದು, ಇತರ 60 ಮಂದಿ ನಾಪತ್ತೆಯಾಗಿದ್ದಾರೆ. ಉತ್ತರಾಖಂಡ, ಪಂಜಾಬ್, ಹಿಮಾಚಲ ಪ್ರದೇಶಗಳಲ್ಲಿ ಮಳೆಯಿಂದಾಗಿ ವ್ಯಾಪಕ ಹಾನಿ ಉಂಟಾಗಿದೆ. ಹಿಮಾಚಲ ಮುಖ್ಯಮಂತ್ರಿ ವೀರಭದ್ರ ಸಿಂಗ್ ಪ್ರವಾಹದಿಂದಾಗಿ ಕಿನೌರ್ ಜಿಲ್ಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಜತೆಗೆ ತೀರ್ಥಕ್ಷೇತ್ರಗಳಾದ ಉತ್ತರ ಕಾಶಿ, ರುದ್ರಪ್ರಯಾಗ, ಕೇದಾರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 24 ಸಾವಿರ ಮಂದಿ ತೀರ್ಥಯಾತ್ರಿಗಳು ಮಾರ್ಗ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಭಾರಿ ಮಳೆಯಿಂದಾಗಿ ವಾರ್ಷಿಕ ಕೈಲಾಸ್ ಮಾನಸ ಸರೋವರ ಯಾತ್ರೆ ರದ್ದುಗೊಳಿಸಲಾಗಿದೆ.
ಕೊಚ್ಚಿಹೋದ 200 ವಾಹನ: ಉತ್ತರಾಖಂಡದಲ್ಲಿ ಈ ಬಾರಿಯ ಬಿರು ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ. ಅಲಕಾನಂದ ನದಿಯಲ್ಲಿನ ಪ್ರವಾಹಕ್ಕೆ 200 ವಾಹನಗಳು ಕೊಚ್ಚಿ ಹೋಗಿವೆ. ಚಮೋಲಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಳೆ ಸಂಬಂಧಿ ದುರಂತಗಳಲ್ಲಿ 50 ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಹಿಂದೂಗಳ ಪವಿತ್ರ ಯಾತ್ರಾ ಸ್ಥಳಗಳಾಗಿರುವ  ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥ್‌ಗಳಿಗೆ ತೆರಳುವ ಪ್ರಮುಖ ರಸ್ತೆಗಳಲ್ಲಿ ಭೂಕುಸಿತ ಸಂಭವಿಸಿದೆ. ಹೀಗಾಗಿ, ಯಾತ್ರಾರ್ಥಿಗಳು ಅಲ್ಲಲ್ಲೇ ಸಿಕ್ಕಿ ಹಾಕಿಕೊಂಡಿದ್ದಾರೆ. ಸುಮಾರು 24 ಸಾವಿರಕ್ಕೂ ಅಧಿಕ ಮಂದಿ ಮಾರ್ಗ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಾರೆ. ವಿದ್ಯುತ್ ಮತ್ತು ದೂರಸಂಪರ್ಕ ವ್ಯವಸ್ಥೆ ಕಡಿದು ಹೋಗಿದೆ. ಪರಿಹಾರ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ಸ್ಪಂದನಾ ದಳ, ಐಟಿಬಿಪಿ ಮತ್ತು ಸೇನೆಯನ್ನು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.
ಹಠಾತ್ ನೆರೆ: ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ವಿವಿಧೆಡೆ ಭಾರಿ ಮಳೆ, ಪ್ರವಾಹ ಮತ್ತು ಹಠಾತ್ ನೆರೆ ಬಂದಿದ್ದರಿಂದ 15 ಮಂದಿ ಅಸುನೀಗಿದ್ದಾರೆ. ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿದ್ದ 45 ಮಂದಿಯನ್ನು ವಾಯುಪಡೆ ಕಾಪ್ಟರ್ ನೆರವಿನಿಂದ ರಕ್ಷಿಸಲಾಗಿದೆ.
52 ಮಂದಿ ಪಾರು: ಪಂಜಾಬ್ ಮತ್ತು ಹರ್ಯಾಣಳಲ್ಲಿ ಕೂಡ ಧಾರಾಕಾರ ಮಳೆಯಾಗಿದೆ. ಹರ್ಯಾಣದ ಯಮುನಾನಗರ ಎಂಬಲ್ಲಿ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ 52 ಮಂದಿಯನ್ನು ರಕ್ಷಿಸಲಾಗಿದೆ. ಕಳೆದ ರಾತ್ರಿಯಿಂದೀಚೆಗೆ ಸುರಿದ ಮಳೆಯಿಂದಾಗಿ ಯಮುನಾ ನದಿಯಲ್ಲಿ ಪ್ರವಾಹ ಉಂಟಾಗಿದೆ.
ಚಮೋಲಿಯಲ್ಲೇ ಉಳಿದ ಭಜ್ಜಿ
ಉತ್ತರಾಖಂಡ ಪ್ರವಾಸಕ್ಕೆ ತೆರಳಿದ್ದ ಕ್ರಿಕೆಟಿಗ ಹರ್ಭಜನ್ ಸಿಂಗ್ ಸಿಕ್ಕಿ ಹಾಕಿಕೊಂಡಿದ್ದಾರೆ. ಚಮೋಲಿ ಜಿಲ್ಲೆಯಲ್ಲಿರುವ ಹೇಮ್‌ಕುಂತ್ ಸಾಹಿಬ್ ಗುರುದ್ವಾರಕ್ಕೆ ತೆರಳಿದ್ದ ಅವರು ಪ್ರವಾಹದ ಕಾರಣ ಅಲ್ಲಿಯೇ ಉಳಿಯುವಂತಾಗಿದೆ. ಅವರು ಈಗ ಇಂಡೋ ಟಿಬೆಟನ್ ಪೊಲೀಸ್ ಪಡೆಯ ಶಿಬಿರದಲ್ಲಿದ್ದಾರೆ ಎನ್ನಲಾಗಿದೆ.
ಹಿಮಾಚಲದಲ್ಲಿ ಭೂಕುಸಿತ
ಹಿಮಾಚಲಪ್ರದೇಶದಲ್ಲೂ ಮುಂಗಾರು ಮಳೆ ಭಾರಿ ಹಾನಿ ಉಂಟುಮಾಡಿದೆ. ಗಡಿಪ್ರದೇಶದ ಕಿನ್ನೌರ್ ಜಿಲ್ಲೆಯ ಸಾಂಗ್ಲಾ ತೆರಳಿದ್ದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅಲ್ಲೇ ಉಳಿಯುವಂತಾಗಿದೆ. ಮಂಡಿ ಲೋಕಸಭೆ ಉಪಚುನಾವಣೆ ಪ್ರಚಾರಕ್ಕೆ ತೆರಳಿದ್ದ ವೇಳೆ ಭಾರಿ ಮಳೆ ಸುರಿದದ್ದರಿಂದ ಸಾಂಗ್ಲಾ ಕಣಿವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿಕೊಂಡು ಹೋಗಿದ್ದರಿಂದ ಅವರು ಅಲ್ಲಿಯೇ ಉಳಿಯುವಂತಾಗಿದೆ.     ಮುಖ್ಯಮಂತ್ರಿ ಸೇರಿ 700 ಮಂದಿ ಹಾಗೂ ಹಿಮಾಚಲ ಪ್ರದೇಶದ ಇತರೆಡೆ ಪ್ರವಾಹ, ಭೂಕುಸಿತದಿಂದಾಗಿ 1000 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಮಳೆಸಂಬಂಧಿ ದುರಂತದಲ್ಲಿ 10 ಮಂದಿ ಅಸುನೀಗಿದ್ದಾರೆ.

Comments

Popular posts from this blog

ಪ್ರಧಾನಿ ಮೋದಿಜೀ ಪ್ರಣಬ್ ಮುಖರ್ಜಿಯವರಿಗೆ ಬರೆದ ಪತ್ರ