ನಮ್ಮ ಸೈನಿಕರ ರಕ್ತ ಬಸಿದು ಯಾಕಾಗಿ ಬಾಂಗ್ಲಾವನ್ನು ವಿಮೋಚನೆ ಮಾಡಿದೆವೋ!
By: Prathap Simha
“ಆ ಕರಾಳ ರಾತ್ರಿ ಕಳೆದು ಮೂವತ್ತೈದು ವರ್ಷಗಳೇ ಆದವು. ಕಾಲ ಉರುಳೇ ಬಿಟ್ಟಿತು ಎಂಬಂತೆ ಭಾಸವಾಗುತ್ತಿದೆ. ಆದರೆ ಹಸಿ ನೆನಪುಗಳು ಇನ್ನೂ ದಿಟ್ಟಿಸಿ, ದುರುಗುಟ್ಟಿ ನೋಡುತ್ತಿವೆ. ನನ್ನ ಮಟ್ಟಿಗೆ ನೌಕಾಪಡೆಯೆಂಬುದು ಮನೆಯಾಚೆಗಿನ ಮನೆ. ಯಾವತ್ತೂ ನೆರವಿಗೆ ಬಂದಿದೆ. ಸಹೋದರತ್ವ, ಕೌಟುಂಬಿಕ ಬೆಸುಗೆ ಮತ್ತು ರಾಷ್ಟ ರೂಪಿಸುವುದು- ಇವುಗಳಿಗೆ ಅತ್ಯುತ್ತಮ ಉದಾಹರಣೆಯೆಂದರೆ ಸೇನಾ ಪಡೆ. ಇಂತಹ ಮಹಾನ್ ಸೇನಾ ಕುಟುಂಬದ ಭಾಗವಾಗಿ ನನ್ನನ್ನು ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು”.
2007 ಡಿಸೆಂಬರ್ 9ರಂದು ದಿಲ್ಲಿಯ Claridges ಹೋಟೆಲ್ನಲ್ಲಿ ಮೇಜರ್ ಜನರಲ್ ಇಯಾನ್ ಕಾರ್ಡೋಝೋ ಬರೆದಿರುವ ”The Sinking of INS Khukri: Survivors stories” ಎಂಬ ಪುಸ್ತಕ ಬಿಡುಗಡೆ ಮಾಡಿದ ಸುಧಾ ಮುಲ್ಲ ಭಾವೋದ್ವೇಗಕ್ಕೊಳಗಾಗುವ ಮುನ್ನ ಹೇಳಿದ್ದಿಷ್ಟು.
ಪ್ರತಿಯೊಬ್ಬ ವೀರ ಸೈನಿಕನ ಹಿಂದೆಯೂ ಸುಧಾ ಮುಲ್ಲ ಅವರಂತಹ ಮಹಾನ್ ಮಹಿಳೆಯರು ಹೆಂಡತಿ, ತಾಯಿ, ಯಾವುದಾದರೊಂದು ರೂಪದಲ್ಲಿರುತ್ತಾರೆ. ನಮ್ಮ ಸೈನಿಕರು ಅತಿಮಾನುಷ ಪೌರುಷ ತೋರಲು ಸಾಧ್ಯವಾಗಿದ್ದರೆ ಅದರ ಹಿಂದೆ ಅವರ ಪತ್ನಿಯರ ಕೊಡುಗೆಯೂ ಇದೆ. ಗಂಡ ದೂರದ ರಣರಂಗದಲ್ಲಿ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದರೆ ಪತ್ನಿಯಾದವಳು ಮನೆ, ಮಕ್ಕಳ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತಿರುತ್ತಾಳೆ. ಇಷ್ಟಕ್ಕೂ ಹೃದಯದಲ್ಲಿ ನಡುಕವನ್ನಿಟ್ಟುಕೊಂಡು ತುಟಿಯ ಮೇಲೆ ನಗು ಬೀರಿ ಗಂಡನನ್ನು ರಣರಂಗಕ್ಕೆ ಕಳುಹಿಸಿಕೊಡುವವಳು ಪತ್ನಿಯೇ. ಕಷ್ಟ ಬಂದಾಗ ತನ್ನ ಹಾಗೂ ಮಕ್ಕಳ ತುತ್ತನ್ನು ದುಡಿಯುವವಳೂ ಅವಳೇ. ಯುದ್ಧ ಕೊನೆಗೊಂಡಾಗ, ಕೆಲವರು ಹಿಂದಿರುಗುವುದೇ ಇಲ್ಲ. ಹಾಗೆ ಗಂಡ ರಣರಂಗದಲ್ಲೇ ಹುತಾತ್ಮನಾದಾಗ ಸೆರಗು ಕಚ್ಚಿ ಮೌನವಾಗಿರುವವಳೂ ಪತ್ನಿಯೇ.
ಸುಧಾಮುಲ್ಲ ಕಥೆಯೂ ಅದೇ.
ಎಲ್ಲಿಯೇ ಯುದ್ಧ ಸಂಭವಿಸಿದರೂ ಸೈನಿಕನಾದವನ ಮುಂದೆ ನಾಲ್ಕು ಸಾಧ್ಯತೆಗಳಿರುತ್ತವೆ-ಜಯಶೀಲನಾಗಿ ಇಲ್ಲವೆ, ಸುರಕ್ಷಿತವಾಗಿ ಮರಳುವುದು. ಗಾಯಗೊಂಡು ಬರುವುದು. ಹೆಣವಾಗಿ ಹಿಂದಿರುಗುವುದು ಅಥವಾ ಶತ್ರುವಿಗೆ ಶರಣಾಗಿ ಯುದ್ಧ ಕೈದಿಯಾಗುವುದು. ಆದರೆ ಸ್ಕ್ವಾಡ್ರನ್ ಕಮಾಂಡರ್ ಕ್ಯಾಪ್ಟನ್ ಮಹೇಂದ್ರನಾಥ್ ಮುಲ್ಲ ವಿಭಿನ್ನ ಹಾದಿ ತುಳಿದವರು.
1971, ಡಿಸೆಂಬರ್ 31ರಂದು ಯುದ್ಧ ಆರಂಭವಾಗಿತ್ತು. ಬಾಂಗ್ಲಾವನ್ನು ವಿಮೋಚನೆಗೊಳಿಸುವ ಸಲುವಾಗಿ ಭಾರತ ರಣರಂಗಕ್ಕಿಳಿದಿತ್ತು. ಅರಬ್ಬೀ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ದಾಳಿಯನ್ನು ಎದುರಿಸಲು ಸಾಧ್ಯವಾಗದೆ ಪಾಕಿಸ್ತಾನ ತತ್ತರಿಸಿ ಹೋಗಿತ್ತು. ಈ ನಡುವೆ ಗುಜರಾತ್ ಸಮೀಪದ ಡಿಯು ಬಂದರಿನಿಂದ 35 ಕಿ.ಮಿ. ದೂರದಲ್ಲಿ ಪಾಕಿಸ್ತಾನದ ಸಬ್ಮರೀನ್ ಅರಬ್ಬೀ ಸಮುದ್ರಕ್ಕೆ ನುಸುಳಿರುವುದನ್ನು ನಮ್ಮ ನೌಕಾಪಡೆ ಪತ್ತೆ ಹಚ್ಚಿತ್ತು. ಅದು ನಮ್ಮ ಬಂದರಿನ ಮೇಲೆ ದಾಳಿ ಮಾಡುವ ಹುನ್ನಾರವಾಗಿತ್ತು. ಅಂತಹ ಯತ್ನವನ್ನು ನಿಷ್ಫಲಗೊಳಿಸುವ ಹಾಗೂ ಸಬ್ಮರೀನನ್ನು ನಾಶಗೊಳಿಸುವ ಸಲುವಾಗಿ ಪಶ್ಚಿಮ ನೌಕಾತುಕಡಿಯ “ಐಎನ್ಎಸ್ -ಖುಕ್ರಿ” ಯುದ್ಧ ನೌಕೆಯನ್ನು ಕಳುಹಿಸಲಾಯಿತು. ಆ ನೌಕೆಯ ಮುಂದಾಳತ್ವ ವಹಿಸಿದ್ದ ವ್ಯಕ್ತಿಯೇ ಕ್ಯಾಪ್ಟನ್ ಮಹೇಂದ್ರನಾಥ್ ಮುಲ್ಲ. ಆದರೆ ಖುಕ್ರಿ ಅತ್ಯಂತ ನಿಧಾನಗತಿಯಲ್ಲಿ ಚಲಿಸುವ ಯುದ್ಧ ನೌಕೆಯಾಗಿತ್ತು. 170/174 ಮಾದರಿಯ ಸುಧಾರಿತ ಸೋನಾರ್ (ಸಬ್ಮರೀನ್ನ ಅಂತರವನ್ನು ಅಳೆಯುವ) ವ್ಯವಸ್ಥೆಯನ್ನು ಅಳವಡಿಸಲಾಗಿದ್ದರಿಂದ ಪರಿಣಾಮಕಾರಿಯಾಗಿ ಶತ್ರುಗಳ ಸಬ್ ಮರೀನ್ಗಳನ್ನು ಪತ್ತೆ ಹಚ್ಚಬೇಕಾದರೆ ಯುದ್ಧ ನೌಕೆ ನಿಧಾನವಾಗಿ ಚಲಿಸಬೇಕಾದ ಅನಿವಾರ್ಯತೆಯೂ ಇತ್ತು.
ದುರದೃಷ್ಟವಶಾತ್, ಪಾಕಿಸ್ತಾನಿ ಸಬ್ಮರೀನ್ನನ್ನು ಪತ್ತೆ ಹಚ್ಚಿ ನಾಶಪಡಿಸಲು ಹೋಗಿದ್ದ ಐಎನ್ಎಸ್ -ಖುಕ್ರಿಯೇ ಸಂಕಷ್ಟಕ್ಕೆ ಸಿಲುಕಿತು.
ಡಿಸೆಂಬರ್ ಒಂಬತ್ತರ ರಾತ್ರಿ 8ರ ವೇಳೆಗೆ ಪಾಕ್ ಸಬ್ಮರೀನ್ ಹಾರಿಸಿದ ಟಾರ್ಪೆಡೋ (ಹಡಗುಗಳನ್ನು ನಾಶಪಡಿಸುವ ಜಲಾಂತರ್ಗಾಮಿ ಕ್ಷಿಪಣಿ) ಐಎನ್ಎಸ್ ಖುಕ್ರಿಗೆ ಬಡಿಯಿತು. ವಾಯು ರಕ್ಷಣೆ ನೀಡಲು ಹೆಲಿಕಾಪ್ಟರ್ಗಳು ಜತೆಗಿರಲಿಲ್ಲ. ಅಪಾಯವನ್ನರಿತ ಮಹೇಂದ್ರನಾಥ್ ಮುಲ್ಲ, ಕೂಡಲೇ ಜೀವರಕ್ಷಕ ಜಾಕೆಟ್ ಧರಿಸಿ ಸಮುದ್ರಕ್ಕೆ ಧುಮುಕಿ ಜೀವ ಉಳಿಸಿಕೊಳ್ಳುವಂತೆ ಸೈನಿಕರಿಗೆ ನಿರ್ದೇಶನ ನೀಡಿದರು. ಈ ಮಧ್ಯೆ ಯುದ್ಧನೌಕೆಯ ಒಂದು ಭಾಗ ನೀರಿನಲ್ಲಿ ಮುಳುಗಲಾರಂಭಿಸಿತು. ತಳಭಾಗದಲ್ಲಿ ಒಂದಷ್ಟು ಜನರು ಸಿಲುಕಿಕೊಂಡಿದ್ದರು. ಅವರನ್ನು ರಕ್ಷಿಸಲು ಮುಂದಾದ ಮುಲ್ಲ ಸ್ವಂತ ಪ್ರಾಣ ಉಳಿಸಿಕೊಳ್ಳುವುದನ್ನೇ ಮರೆತರು. 18 ಅಧಿಕಾರಿಗಳು ಹಾಗೂ 176 ನಾವಿಕರ ಜೊತೆ ತಾವೂ ನೀರು ಪಾಲಾದರು. ಮನಸ್ಸು ಮಾಡಿದ್ದರೆ ಅವರು ತಮ್ಮ ಜೀವವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಸೇನಾ ಪಡೆಗಳ ಶ್ರೇಷ್ಠ ಪರಂಪರೆಗನುಗುಣವಾಗಿ ಸಾವಿಗೆ ಆಹ್ವಾನ ನೀಡಿದರು. ಸ್ವತಂತ್ರ ಭಾರತದ ನೌಕಾಪಡೆ ಇತಿಹಾಸದಲ್ಲಿ ಹಡಗಿನೊಂದಿಗೇ ಜಲಸಮಾಧಿಯಾದ ಮೊದಲ ಹಾಗೂ ಏಕೈಕ ಕ್ಯಾಪ್ಟನ್ ಮುಲ್ಲಾ. ಅವರು ಸಾಯುವ ಮೊದಲು 67 ಜನರ ಜೀವ ರಕ್ಷಣೆ ಮಾಡಿದ್ದರು.
ಅಂದು ನೌಕೆಯ ಒಂದು ಭಾಗ ನೀರಿನಲ್ಲಿ ಮುಳುಗುತ್ತಿದ್ದರೆ ಮೇಲ್ಮುಖವಾಗಿದ್ದ ಇನ್ನೊಂದು ಭಾಗದಲ್ಲಿ ಮುಲ್ಲ ಸಿಗರೇಟು ಸೇದುತ್ತಿದ್ದರು! ಬದುಕುಳಿದವರು ಮುಲ್ಲ ಅವರನ್ನು ಕಂಡಿದ್ದು ಅದೇ ಕಡೆ ಬಾರಿ. ಅವರು ಇಂದು ನಮ್ಮೊಂದಿಗಿಲ್ಲ.
ಆದರೆ…
ನಲವತ್ತೆರಡು ವರ್ಷಗಳ ನಂತರ ಹಿಂದಿರುಗಿ ನೋಡಿದಾಗ, ಪ್ರಸ್ತುತ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ಕಂಡಾಗ ಏಕಾಗಿ ಮಹೇಂದ್ರನಾಥ ಮುಲ್ಲ ಅವರಂಥ ಸೈನಿಕರನ್ನು ಅನ್ಯಾಯವಾಗಿ ಬಲಿಕೊಟ್ಟೆವೋ ಎಂದನಿಸುತ್ತದೆ! ಏಕಾಗಿ ನಮ್ಮ ಸೈನ್ಯವನ್ನು ಕಳುಹಿಸಿ ಬಾಂಗ್ಲಾ ವಿಮೋಚನೆ ಮಾಡಬೇಕಿತ್ತು ಎಂಬ ಪ್ರಶ್ನೆ ಕಾಡುತ್ತದೆ.
ಇಷ್ಟಕ್ಕೂ ಇಂದು ಬಾಂಗ್ಲಾದಲ್ಲಿ ನಡೆಯುತ್ತಿರುವುದಾದರೂ ಏನು?
1947ರಲ್ಲಿ ನಮ್ಮ ಗಾಂಧಿ ಹಾಗೂ ನೆಹರು ಮಹಾಶಯರು ಸಿಂಧು ನದಿಯ ತಟ (ಪಶ್ಚಿಮ ಪಾಕಿಸ್ತಾನ) ಮತ್ತು ಗಂಗೆ ಪದ್ಮಾಳಾಗಿ ಬಂಗಾಳಕೊಲ್ಲಿ ಸೇರುವ ಫಲವತ್ತಾದ ಭೂಮಿಯನ್ನು (ಪೂರ್ವ ಪಾಕಿಸ್ತಾನ) ತುಂಡರಿಸಿ ಮುಸಲ್ಮಾನರಿಗೆ ಕೊಟ್ಟಿದ್ದರು. ಹಾಗಂತ ಇವೆರಡೂ ಭಾಗಗಳು ಸಂಯುಕ್ತ ಪಾಕಿಸ್ತಾನವಾಗಿ ಬಾಳುವ ಲಕ್ಷಣ ಕಾಣಲಿಲ್ಲ. 1952ರಲ್ಲೇ ಪೂರ್ವ ಪಾಕಿಸ್ತಾನದಲ್ಲಿ (ಬಾಂಗ್ಲಾ) ಪಶ್ಚಿಮ ಪಾಕಿಸ್ತಾನದ (ಈಗಿನ ಪಾಕ್) ದಬ್ಬಾಳಿಕೆ ವಿರುದ್ಧ ಹೋರಾಟ ಆರಂಭವಾಯಿತು. ಶೇಖ್ ಮುಜಿಬುರ್ ರೆಹಮಾನರ ಅವಾಮಿ ಲೀಗ್ ಪಕ್ಷ ಅದರ ಮುಂದಾಳತ್ವ ವಹಿಸಿತು. 1970ರ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪೂರ್ವ ಪಾಕಿಸ್ತಾನದ ಎಲ್ಲ ಸ್ಥಾನಗಳನ್ನು ಗೆದ್ದುಕೊಂಡರೂ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಬದಲಿಗೆ ಮುಜಿಬುರ್ ರೆಹಮಾನರನ್ನೇ ಬಂಧಿಸಿ ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು. ಜತೆಗೆ ಪೂರ್ವಪಾಕಿಸ್ತಾನದ ಮೇಲೆ ಮಿಲಿಟರಿ ಆಡಳಿತವನ್ನು ಹೇರಲಾಯಿತು. ಒಂಬತ್ತು ತಿಂಗಳ ಮಿಲಿಟರಿ ಆಡಳಿತದಲ್ಲಿ ಪೂರ್ವ ಪಾಕಿಸ್ತಾನವನ್ನು ಪಾಕ್ ಸೇನೆ ವೇಶ್ಯಾಗೃಹ ಹಾಗೂ ಸ್ಮಶಾನವನ್ನಾಗಿ ಮಾಡಿಬಿಟ್ಟಿತು. ಮೂರು ಲಕ್ಷ ಜನರ ಕೊಲೆ ನಡೆದುಹೋಯಿತು, 20 ಸಾವಿರ ಮಹಿಳೆಯರು ಅತ್ಯಾಚಾರಕ್ಕೊಳಗಾದರು, 30 ಲಕ್ಷ ಜನ ನಿರಾಶ್ರಿತರಾದರು. ದುರದೃಷ್ಟವಶಾತ್ ಬಂಗಾಳಿಗಳಲ್ಲೆ ಒಂದು ವರ್ಗ ‘ರಝಾಕರ್ಸ್’ (ಸ್ವಯಂಸೇವಕರ ಸೇನೆ) ಎಂಬ ಪಡೆ ಕಟ್ಟಿಕೊಂಡು ಪಾಕಿಸ್ತಾನಿ ಸೇನೆಯ ಬೆಂಬಲಕ್ಕೆ ನಿಂತುಬಿಟ್ಟರು! ದೌರ್ಜನ್ಯದಲ್ಲಿ ತಾವೂ ಪಾಲುಗೊಂಡರು!! ಆಗ ಜನರ ಅಳಲನ್ನು ಅರ್ಥಮಾಡಿಕೊಂಡು ಭಾರತ ತನ್ನ ಸೇನೆಯನ್ನು ಕಳುಹಿಸಿ, ಪೂರ್ವ ಪಾಕಿಸ್ತಾನವನ್ನು ಸ್ವತಂತ್ರಗೊಳಿಸಿತು, ಅದು ಬಾಂಗ್ಲಾದೇಶವಾಗಿ ಹೊರಹೊಮ್ಮಿತು.
ಆದರೆ ಅಂದು ರಝಾಕರ್ಸ್ ಪಡೆ ಕಟ್ಟಿಕೊಂಡು ಪಾಕಿಸ್ತಾನಿ ಸೇನೆಗೆ ಬೆಂಬಲ ನೀಡಿದ್ದ ದುರುಳರಿಗೆ ಮಾತ್ರ ಯಾವ ಶಿಕ್ಷೆಯೂ ಆಗಲಿಲ್ಲ!
ಹಾಗಾಗಿ 2009ರಲ್ಲಿ ಪ್ರಧಾನಿ ಶೇಖ್ ಹಸೀನಾ ಸರ್ಕಾರದ ಮೇಲೆ ಒತ್ತಡ ಆರಂಭವಾಯಿತು. ಇಂದು ಜಮಾತೆ ಇಸ್ಲಾಮಿ ಎಂಬ ಮೂಲಭೂತವಾದಿ ಸಂಘಟನೆ ಕಟ್ಟಿಕೊಂಡಿರುವ ಅಂದಿನ ‘ ರಝಾಕರ್ಸ್’ ಪಡೆಯಲ್ಲಿದ್ದ ನೇತಾರರನ್ನು ಯುದ್ಧಾಪರಾಧಗಳ ಸಲುವಾಗಿ ವಿಚಾರಣೆಗೆ ಗುರಿಪಡಿಸಬೇಕೆಂದು ಜನ ಒತ್ತಾಯಿಸತೊಡಗಿದರು. 2010ರಲ್ಲಿ ಎರಡು ಟ್ರಿಬ್ಯುನಲ್ಗಳೂ ಆರಂಭವಾದವು. ಆದರೆ ಕಠಿಣ ಶಿಕ್ಷೆ ವಿಧಿಸುವ ಯಾವ ಲಕ್ಷಣಗಳೂ ಕಾಣಲಿಲ್ಲ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಯಿತು. ಕಳೆದ ಫೆಬ್ರವರಿ 5ರಂದು ಶಾಬಾಗ್ ವೃತ್ತದಲ್ಲಿ ಲಕ್ಷಾಂತರ ಜನ ನೆರೆದುಬಿಟ್ಟರು. ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು. ಅದರ ಫಲವಾಗಿ ‘Butcher of Bengalis’ (ಬಂಗಾಳಿಗಳ ಕೊಲೆಗಡುಕ) ಎಂದೇ ಕುಖ್ಯಾತನಾಗಿದ್ದ ಅಬ್ದುಲ್ ಖಾದಿರ್ ಮೊಲ್ಲಾ ಎಂಬ ಜಮಾತೆ ನಾಯಕನಿಗೆ ಗಲ್ಲುಶಿಕ್ಷೆಯನ್ನೂ ವಿಧಿಸಲಾಯಿತು.
ಆದರೆ…
ಶಿಕ್ಷೆ ವಿರುದ್ಧ ಬೀದಿಗಿಳಿದ ಜಮಾತೆ ದುರುಳರು ಗುರಿಯಾಗಿಸಿಕೊಂಡಿದ್ದು ಮಾತ್ರ ಅಲ್ಪಸಂಖ್ಯಾತ ಹಿಂದುಗಳನ್ನು! ಇಲ್ಲಿವರೆಗೂ 100ಕ್ಕೂ ಹೆಚ್ಚು ಹಿಂದುಗಳು ಬಲಿಯಾಗಿದ್ದಾರೆ, ಮುನ್ನೂರಕ್ಕೂ ಅಧಿಕ ದೇವಸ್ಥಾನಗಳು ಸುಟ್ಟು ಭಸ್ಮವಾಗಿವೆ. ಈ ಮಧ್ಯೆ ಜಮಾತೆ ಪರವಾಗಿ ನಮ್ಮ ಕೋಲ್ಕತಾದಲ್ಲಿ 50 ಸಾವಿರಕ್ಕೂ ಹೆಚ್ಚು ಮುಸಲ್ಮಾನರು ಪ್ರತಿಭಟನೆ ಮಾಡಿದ್ದಾರೆ! ದೇಶದ್ರೋಹಿಗಳ ಪರವಾಗಿಯೇ ನಿಲ್ಲುವ ಕಾಂಗ್ರೆಸ್ನಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಬಿಡಿ. ಆದರೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಹಿಂದುಗಳಿಗೆ ರಕ್ಷಣೆ ನೀಡುವಂತೆ ಬಾಂಗ್ಲಾ ಸರ್ಕಾರಕ್ಕೆ ಕರೆ ನೀಡಿದ್ದಾರೆ!
ಇವತ್ತು ಬಾಂಗ್ಲಾದಲ್ಲಿ ಹಿಂದುಗಳ ಸ್ಥಿತಿ ಏನಾಗಿದೆ?
ಸ್ವಾತಂತ್ರ್ಯ ಬಂದಾಗ ಬಾಂಗ್ಲಾದಲ್ಲಿ 24 ಪರ್ಸೆಂಟ್ ಇದ್ದ ಹಿಂದುಗಳು ಇಂದು 5 ಪರ್ಸೆಂಟ್ಗೆ ಕುಸಿದಿದ್ದಾರೆ, ಪ್ರತಿ ವರ್ಷ ದುರ್ಗಾ ಪೂಜೆ ಬಂತೆಂದರೆ ಪೆಂಡಾಲ್ಗಳ ಮೇಲೆ ದಾಳಿ ನಡೆಯುತ್ತದೆ, ಮೂರ್ತಿಗಳು ಧ್ವಂಸಗೊಳ್ಳುತ್ತವೆ. ಈ ಮಧ್ಯೆ, ಮೇ 6 ರಂದು ಧರ್ಮನಿಂಧನೆ ಕಾಯಿದೆ ತರಬೇಕೆಂದು ಬೀದಿಗಿಳಿದ ಮೂಲಭೂತವಾದಿಗಳು ಹಾಗೂ ಪೊಲೀಸರ ನಡುವೆ ಕದನವೇ ನಡೆದಿದೆ. ಒಂದು ವೇಳೆ, ಧರ್ಮನಿಂದನೆ ಕಾಯಿದೆ ಜಾರಿಗೆ ಬಂದರೆ ಹಿಂದುಗಳನ್ನು ಹುಸಿ ಆರೋಪ ಮಾಡಿ ಹಿಂಸಿಸುವುದು, ಹತ್ಯೆ ಮಾಡುವುದು ಆರಂಭವಾಗುತ್ತವೆ.
ಇದನ್ನೆಲ್ಲಾ ನೋಡಿದಾಗ ಯಾವ ಕಾರಣಕ್ಕಾಗಿ ಮಹೇಂದ್ರನಾಥ ಮುಲ್ಲಾ ಅವರಂಥ ಸೈನಿಕರ ರಕ್ತ ಬಸಿದು ನಾವು ಬಾಂಗ್ಲಾ ವಿಮೋಚನೆ ಮಾಡಿದೆವೋ ಎಂದನಿಸುವುದಿಲ್ಲವೆ? ಪಾಕಿಸ್ತಾನ-ಬಾಂಗ್ಲಾದೇಶಗಳು ಬಡಿದಾಡಿಕೊಂಡಿದ್ದರೇ ಭಾರತಕ್ಕೆ ಒಳಿತಾಗುತ್ತಿತ್ತೇನೋ ಎಂಬ ಅನಿಸಿಕೆ ಮೂಡುವುದಿಲ್ಲವೆ?
Comments
Post a Comment