`ಮೋದಿ ಮುಸ್ಲಿಂ ವಿರೋಧಿ’ ಎಂಬ ಅಪಪ್ರಚಾರ ಅದೆಷ್ಟು ಸತ್ಯ?

Neranota-dugulaಮೋದಿಯವರನ್ನು ಬಿಜೆಪಿಯ ಕೆಲವರೂ ಸೇರಿದಂತೆ ಅನೇಕರು ವಿರೋಧಿಸುತ್ತಿದ್ದಾರೆಂದರೆ ಅವರೊಳಗೆ ಯಾವುದೋ ಭೀತಿ ಮನೆ ಮಾಡಿರಲೇಬೇಕು. ತಮ್ಮ ಸ್ವಾರ್ಥಿ ರಾಜಕಾರಣಕ್ಕೆ, ಸುಳ್ಳುಸೆಟೆಗಳಿಗೆ, ನಾನಾ ಬಗೆಯ ಅಪಸವ್ಯಗಳಿಗೆ ಮೋದಿ ಆಡಳಿತ ಪೂರ್ಣ ವಿರಾಮ ಹಾಕಬಹುದೆಂಬುದೇ ಆ ಭೀತಿ! ಕತ್ತಲೆಯನ್ನೇ ಇಷ್ಟಪಡುವ ಖದೀಮರು ಬೆಳಕನ್ನು ಖಂಡಿತ ಬಯಸಲಾರರು. ಅದರಲ್ಲೂ ಕಣ್ಣು ಚುಚ್ಚುವ ಪ್ರಖರ ಬೆಳಕು ನೋಡಿದೊಡನೆ ಅವರಿಗೆ ಜಂಘಾಬಲವೇ ಉಡುಗಿ ಹೋಗುವುದು ಸ್ವಾಭಾವಿಕ!

NERA-6ನರೇಂದ್ರ ಮೋದಿಯವರ ರಾಜಕೀಯ ವಿರೋಧಿಗಳ ಸಂಖ್ಯೆ ದಿನೇದಿನೇ ಏರತೊಡಗಿದೆಯೆ?
ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿಯವರನ್ನು ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸಿದ ಬಳಿಕ ಈ ಪ್ರಶ್ನೆಗೆ ಇನ್ನಷ್ಟು ಮಹತ್ವ ಬಂದಿದೆ. ಮೋದಿಯವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಲಾಗುವುದೆಂಬ ವದಂತಿ ಕಾರ್ಯಕಾರಿಣಿ ಸಭೆಗೆ ಮುನ್ನವೇ ಎಲ್ಲೆಡೆ ಹರಡಿತ್ತು. ಮಾಧ್ಯಮಗಳಲ್ಲಿ ಈ ಕುರಿತು ವರದಿಯೂ ಪ್ರಕಟವಾಗಿತ್ತು. ಇದೇ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ಧುರೀಣ, ಮೋದಿಯವರನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸಿದ ಬಿಜೆಪಿಯ ಭೀಷ್ಮ ಎಲ್.ಕೆ.ಆಡ್ವಾಣಿ ಗೋವಾ ಸಭೆಗೆ ಗೈರು ಹಾಜರಾಗಿದ್ದುದು ಬಿಜೆಪಿಯಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದ ರಾಜಕೀಯದಲ್ಲೂ ಸಂಚಲನ ಮೂಡಿಸಿತ್ತು. ಆಡ್ವಾಣಿ ಗೈರು ಹಾಜರಿಗೆ ಹೊಟ್ಟೆ ನೋವು ಕಾರಣವೆಂದು ಹೇಳಲಾಯಿತಾದರೂ ಅದು ಹೊಟ್ಟೆ ನೋವಲ್ಲ, ಮೋದಿಯವರ ಬಗೆಗಿದ್ದ `ಹೊಟ್ಟೆ ಉರಿ’ ಎಂದು ಅರಿಯಲು ದೇಶದ ಜನತೆಗೆ ವಿಶೇಷ ಪಾಂಡಿತ್ಯವೇನೂ ಬೇಕಾಗಿರಲಿಲ್ಲ. ಆಡ್ವಾಣಿ ಉದ್ದೇಶಪೂರ್ವಕವಾಗಿಯೇ ಗೋವಾ ಸಭೆಗೆ ಗೈರು ಹಾಜರಾಗಿದ್ದರು. ಶಿಸ್ತಿನ ಸಿಪಾಯಿಯಾಗಿರುವ ಆಡ್ವಾಣಿ ತಮ್ಮ ಜೀವಮಾನದಲ್ಲಿ ಜನಸಂಘ ಹಾಗೂ ಬಿಜೆಪಿ ಸಭೆಗಳಿಗೆ ಹೀಗೆ ಗೈರುಹಾಜರಾದ ಉದಾಹರಣೆಗಳೇ ಇಲ್ಲ. ಆದರೆ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಅವರು ಗೈರು ಹಾಜರಾಗಿದ್ದು `ಮೋದಿ ಅಂಶ’ದ ಹಿನ್ನೆಲೆಯಲ್ಲೇ ಎಂಬುದು ಸ್ಪಷ್ಟ. ಏಕೆಂದರೆ ಮೋದಿಯವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸಿದ ಮರುದಿನವೇ ಅವರು ಬಿಜೆಪಿಯಲ್ಲಿ ತಾವು ಹೊಂದಿರುವ ಎಲ್ಲ ಪ್ರಮುಖ ಸ್ಥಾನಗಳಿಗೂ ರಾಜೀನಾಮೆ ನೀಡಿ ಬಿಜೆಪಿಯ ಪ್ರಮುಖರಿಗೆ ಹಾಗೂ ಕಾರ್ಯಕರ್ತರಿಗೆ ತೀವ್ರ ಮುಜುಗರ ಉಂಟುಮಾಡಿದ್ದರು. ಆ ಬಳಿಕ ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಸೇರಿದಂತೆ ಹಲವರ ಹಿತವಚನಗಳಿಗೆ ಮಣಿದು ರಾಜೀನಾಮೆ ವಾಪಸ್ ಪಡೆದ ಪ್ರಸಂಗವು ನಡೆದಿದೆಯಾದರೂ ಮೋದಿ ರಾಜಕಾರಣದಲ್ಲಿ ಉನ್ನತ ಹುದ್ದೆಗೆ ಮೇಲೇರುವುದು ಆಡ್ವಾಣಿಯವರಿಗೆ ಇಷ್ಟವಿಲ್ಲ ಎಂಬ ಸಂದೇಶವಂತೂ ರವಾನೆಯಾಗಿದೆ. ಹೀಗೆ ಬಿಜೆಪಿಯಲ್ಲೇ ಮೋದಿ ವಿರೋಧಿಗಳು ಸೃಷ್ಟಿಯಾಗುತ್ತಿರುವುದು ವಿಚಿತ್ರವಾದರೂ ಸತ್ಯಸಂಗತಿ. ಅಷ್ಟಕ್ಕೂ ಮೋದಿ ಏಕೆ ಪ್ರಚಾರ ಸಮಿತಿ ಅಧ್ಯಕ್ಷರಾಗಬಾರದು? ಅವರೇಕೆ ಪ್ರಧಾನಿ ಅಭ್ಯರ್ಥಿಯಾಗಬಾರದು? ಈ ಪ್ರಶ್ನೆಗಳಿಗೆ ಮಾತ್ರ ಬಿಜೆಪಿಯಲ್ಲಿರುವ ಮೋದಿ ವಿರೋಧಿಗಳು ನೇರವಾಗಿ ಬಹುಶಃ ಉತ್ತರಿಸಲಾರರು. ಮೋದಿ ಅಕಸ್ಮಾತ್ ಪ್ರಧಾನಿಯಾದರೆ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಸಂಚಕಾರ ಬರಬಹುದೆನ್ನುವ ಭೀತಿಯಂತೂ ಇವರೆಲ್ಲರಲ್ಲೂ ಅಡಗಿದೆ.
ಬಿಜೆಪಿಯೊಳಗೆ ಮೋದಿಯ ಬಗ್ಗೆ ಈ ಪರಿಯ ವಿರೋಧವಿದ್ದರೆ, ಹೊರಗೆ ಮೋದಿಯ ಬಗ್ಗೆ ಇರುವ ವಿರೋಧವಂತೂ ಪದೇಪದೇ ಅನಾವರಣಗೊಳ್ಳುತ್ತಲೇ ಇದೆ. ಮೋದಿ ಮುಸ್ಲಿಮರ ವಿರೋಧಿ ಎನ್ನುವುದು ಮೋದಿಯವರನ್ನು ವಿರೋಧಿಸುವುದಕ್ಕೆ ಹೊರಗಿನವರು ನೀಡುವ ಮುಖ್ಯ ಕಾರಣ. ಆದರೆ ಈ ಮಾತಿನಲ್ಲಿ ಸತ್ಯಾಂಶವೆಷ್ಟು ಎಂಬುದನ್ನು ಮಾತ್ರ ಹೆಚ್ಚಿನವರು ವಿಶ್ಲೇಷಣೆಗೊಳಪಡಿಸಿಲ್ಲ.
ಸತ್ಯಾಂಶವೇನು?
ಮೋದಿ ರಾಜ್ಯದಲ್ಲಿ ಸಾವಿರಾರು ಮುಸ್ಲಿಮರು ಗೋಧ್ರೋತ್ತರ ಗಲಭೆ ಸಂದರ್ಭದಲ್ಲಿ ಹತ್ಯೆಗೀಡಾದರು, ಮೋದಿ ಮುಸ್ಲಿಮರನ್ನು ನಖಶಿಖಾಂತ ದ್ವೇಷಿಸುತ್ತಾರೆ. ಮುಸ್ಲಿಮರೂ ಕೂಡ ಮೋದಿಯವರನ್ನು ಅಷ್ಟೇ ಉಗ್ರವಾಗಿ ದ್ವೇಷಿಸುತ್ತಾರೆ, ಮೋದಿಯೇನಾದರೂ ಈ ದೇಶದ ಪ್ರಧಾನಿಯಾದರೆ ಭಾರತದ ಮುಸ್ಲಿಮರು ನೇರವಾಗಿ ಯಮಪುರಿಗೇ ಹೋಗಬೇಕಾಗುತ್ತದೆ… ಮುಂತಾದ ತಳಬುಡವಿಲ್ಲದ, ಹೀನ ಅಪಪ್ರಚಾರ ಮಾಧ್ಯಮಗಳಲ್ಲಿ ನಡೆಯುತ್ತಲೇ ಇದೆ. `ನಡೆಯುತ್ತಲೇ ಇದೆ’ ಅನ್ನುವುದಕ್ಕಿಂತ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿದ್ದಾರೆ ಎನ್ನುವುದೇ ಹೆಚ್ಚು ಸಮಂಜಸ. ಆದರೆ ಈ ಅಪಪ್ರಚಾರದಲ್ಲಿ ಎಳ್ಳಷ್ಟೂ ಹುರುಳಿಲ್ಲ. ಕೆಳಗಿನ ಒಂದಿಷ್ಟು ನಿದರ್ಶನಗಳನ್ನು ಗಮನಿಸಿದರೆ ಮೋದಿ ಮುಸ್ಲಿಂ ವಿರೋಧಿ ಎಂಬ ಅಪಪ್ರಚಾರದ ಬಲೂನ್ ಠುಸ್ಸೆಂದು ಒಡೆದು ಹೋಗಬಲ್ಲದು:
2012 ರಲ್ಲಿ ಗುಜರಾತ್ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಆ ರಾಜ್ಯದ ಶೇ. 31 ಕ್ಕೂ ಹೆಚ್ಚು ಮಂದಿ ಮುಸ್ಲಿಮರು ಓಟು ಹಾಕಿದ್ದು ಬಿಜೆಪಿಗೆ. ಮೊನ್ನೆ ಮೊನ್ನೆ ನಡೆದ 2 ಲೋಕಸಭೆ ಹಾಗೂ 4 ವಿಧಾನಸಭೆ ಉಪಚುನಾವಣೆಯಲ್ಲೂ ಮುಸ್ಲಿಮರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಏಕೆಂದರೆ ಈ 6 ಕ್ಷೇತ್ರಗಳೂ ಕಾಂಗ್ರೆಸ್ ಕೈಯಲ್ಲಿತ್ತು. ಈ ಬಾರಿ ಮಾತ್ರ ಅವೆಲ್ಲವೂ ಬಿಜೆಪಿ ಪಾಲಾಗಿವೆ. ಮುಸ್ಲಿಮರು ಮತ ಚಲಾಯಿಸದಿದ್ದರೆ ಬಿಜೆಪಿ ಆ ಕ್ಷೇತ್ರಗಳಲ್ಲಿ ಖಂಡಿತ ಗೆಲ್ಲಲಾಗುತ್ತಿರಲಿಲ್ಲ.
ಗುಜರಾತ್‌ನಲ್ಲಿ ಮುಸ್ಲಿಂ ಬಾಹುಳ್ಯವಿರುವ ವಿಧಾನಸಭಾ ಕ್ಷೇತ್ರಗಳು ಒಟ್ಟು 8. ಈ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಮುಸ್ಲಿಮರು ಮತ ಚಲಾಯಿಸದಿದ್ದರೆ ಅಲ್ಲೆಲ್ಲ ಬಿಜೆಪಿ ಗೆಲ್ಲಲು ಸಾಧ್ಯವಾಗುತ್ತಿತ್ತೆ?
ಕಳೆದ 60 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಗುಜರಾತ್ `ಕೋಮುಗಲಭೆರಹಿತ ದಶಕ’ವನ್ನು ಕಂಡಿದ್ದು ಮೋದಿ ಆಡಳಿತಕ್ಕೆ ಬಂದ ನಂತರವೇ. ಅದಕ್ಕೂ ಮೊದಲು ಗುಜರಾತ್‌ನಲ್ಲಿ ಸಾಕಷ್ಟು ಕೋಮು ದಂಗೆಗಳು ನಡೆದಿವೆ. ಆಗೆಲ್ಲ ಇದ್ದುದು ಬಿಜೆಪಿ ಸರ್ಕಾರವಲ್ಲ, ಕಾಂಗ್ರೆಸ್ ಸರ್ಕಾರ. 1986 ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಕೋಮು ದಂಗೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಮುಸ್ಲಿಮರು ಹತ್ಯೆಗೀಡಾದರು. ಇಡೀ ಮುಸ್ಲಿಂ ಸಮುದಾಯವನ್ನೇ ಗುರುತು ಸಿಗದಂತೆ ಆಗ ಹೊಸಕಿ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಗುಜರಾತನ್ನು ಆಳುತ್ತಿದ್ದುದು ಮುಖ್ಯಮಂತ್ರಿ ಹಿತೇಂದ್ರ ದೇಸಾಯಿಯವರ ಕಾಂಗ್ರೆಸ್ ಸರ್ಕಾರ. ಗುಜರಾತಿನಲ್ಲಿ ಪ್ರಮುಖ ಕೋಮು ದಂಗೆಗಳು ಸಿಡಿದಿದ್ದು 1969, 87, 89, 90 ಹಾಗೂ 92 ರಲ್ಲಿ. ಸಾವಿರಾರು ಮುಸಲ್ಮಾನರನ್ನು ಹತ್ಯೆ ಮಾಡಲಾಯಿತು. ಕೋಟಿಗಟ್ಟಲೆ ಹಣವನ್ನು ಲಪಟಾಯಿಸಲಾಯಿತು. ಆದರೆ ಹೀಗೆ ಮಾಡಿದ ಆರೋಪಿಗಳಿಗೆ ಶಿಕ್ಷೆಯಿರಲಿ, ಅವರ ವಿರುದ್ಧ ಚಾರ್ಜ್ ಶೀಟ್ ಕೂಡ ದಾಖಲಿಸಲಿಲ್ಲ. ಎಫ್‌ಐಆರ್ ಅಂತೂ ಇಲ್ಲವೇ ಇಲ್ಲ. ಆದರೆ ಗುಜರಾತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಸಲ್ಮಾನರ ವಿರುದ್ಧ ದಂಗೆಯೆದ್ದ ಬಹುಸಂಖ್ಯಾತ ಸಮುದಾಯದ 200 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆಯನ್ನೂ ವಿಧಿಸಲಾಗಿದೆ. ಈ ಪೈಕಿ 150 ಮಂದಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ.
ಗುಜರಾತ್‌ನ ಗೋಧ್ರೋತ್ತರ ಹತ್ಯಾಕಾಂಡವನ್ನು ಮುಂದಿಟ್ಟುಕೊಂಡು ಬಿಜೆಪಿಯ `ಮುಸ್ಲಿಂ ನೀತಿ’ಯನ್ನು ಪ್ರಶ್ನಿಸುವವರು ಬಿಹಾರದಲ್ಲಿ 1964 ರಲ್ಲಿ ನಡೆದ ಹತ್ಯಾಕಾಂಡ, 1980 ರಲ್ಲಿ ನಡೆದ ಉತ್ತರಪ್ರದೇಶದ ಮೊರದಾಬಾದ್‌ನಲ್ಲಿ, 1989 ಅಹಮದಾಬಾದ್‌ನಲ್ಲಿ, 1983 ರಲ್ಲಿ ಅಸ್ಸಾಂನ ನೆಲ್ಲಿಯಲ್ಲಿ , 1980 ರಲ್ಲಿ ಬಿಹಾರದ ಭಾಗಲ್ಪುರದಲ್ಲಿ, 1993 ರಲ್ಲಿ ಮುಂಬಯಿಯಲ್ಲಿ… ಹೀಗೆ ದೇಶದಾದ್ಯಂತ ನಡೆದ ಹಲವಾರು ಹತ್ಯಾಕಾಂಡಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಇಲ್ಲೆಲ್ಲ ಮುಸ್ಲಿಮರು ಗುಜರಾತ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಹತ್ಯೆಗೀಡಾಗಿದ್ದಾರೆ. ಅಲ್ಲದೆ ಈ ಸಂದರ್ಭಗಳಲ್ಲಿ ಅಲ್ಲಿ ಅಧಿಕಾರದಲ್ಲಿದ್ದುದು ಬಿಜೆಪಿಯಲ್ಲ, ಕಾಂಗ್ರೆಸ್! ಹೀಗಿದ್ದರೂ ಗುಜರಾತ್‌ನ ಏಕೈಕ ಘಟನೆಗಾಗಿ ಬಿಜೆಪಿಯನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿರುವುದೇಕೆ? ೧೯೮೪ರಲ್ಲಿ ದೆಹಲಿಯಲ್ಲಿ ಸಿಖ್ಖರ ಸಾಮೂಹಿಕ ನರಮೇಧ ನಡೆದಾಗ ಅಲ್ಲಿ ಅಧಿಕಾರದಲ್ಲಿದ್ದವರು ಯಾರು? ಸಿಖ್ಖರ ನರಮೇಧ ನಡೆದಾಗ ಹತ್ಯೆಗೀಡಾದ ಸಾವಿರಾರು ಅಮಾಯಕ ಸಿಖ್ಖರ ಕುಟುಂಬಗಳಿಗೆ ಸಾಂತ್ವನ ಹೇಳುವ ಬದಲು ಆಗ ಪ್ರಧಾನಿಯಾಗಿದ್ದ ರಾಜೀವ್ ಹೇಳಿದ್ದೇನು? `ದೊಡ್ಡ ಬಿರುಗಾಳಿ ಬಂದಾಗ ಮರಗಿಡಗಳು ಉರುಳಿ ಬೀಳುವುದು ಸ್ವಾಭಾವಿಕ’. ಕಾಂಗ್ರೆಸ್ ದುಷ್ಟರ್ಮಿಗಳಿಂದ ಸಿಖ್ಖರ ಹತ್ಯೆಯಾಗಿದ್ದನ್ನು ಅದೊಂದು ಸ್ವಾಭಾವಿಕ ಘಟನೆಯೆಂದು ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ತಳ್ಳಿ ಹಾಕಿದರಲ್ಲ, ಈ ಬಗ್ಗೆ ಮಾಧ್ಯಮಗಳೂ ಸೇರಿದಂತೆ ದೇಶದ ಜಾತ್ಯತೀತವಾದಿಗಳು, ಮಾನವಹಕ್ಕು ಹೋರಾಟಗಾರರು ಯಾಕೆ ತುಟಿಬಿಚ್ಚುತ್ತಿಲ್ಲ?
ಗುಜರಾತಿನಲ್ಲಿ ಮುಸ್ಲಿಮರು ನಿಜಕ್ಕೂ ಮೋದಿಯನ್ನು ದ್ವೇಷಿಸುತ್ತಿದ್ದಾರೆಯೆ? ಅಥವಾ ಗೌರವಿಸುತ್ತಿದ್ದಾರೆಯೆ? ಈ ಬಗ್ಗೆ ಯಾವುದೇ ಮಾಧ್ಯಮಗಳಾಗಲೀ, ರಾಜಕೀಯ ವಿಶ್ಲೇಷಕರಾಗಲಿ ಪಾರದರ್ಶಕ ಸಮೀಕ್ಷೆಯನ್ನು ಇದುವರೆಗೂ ಪ್ರಕಟಿಸಿಲ್ಲ. ಗುಜರಾತಿನ ಮುಸ್ಲಿಮರ ಮಾನಸಿಕತೆಗೆ ಕನ್ನಡಿ ಹಿಡಿಯುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ತೀಸ್ತಾ ಸೆಟಲ್‌ವಾಡ್‌ಗಳಂತಹ ತಲೆತಿರುಕ ಬುದ್ಧಿಜೀವಿಗಳು ಬೊಗಳಿದ್ದನ್ನೇ ಸತ್ಯವೆಂದು ಪ್ರಸಾರ ಮಾಡುತ್ತಿರುವ ಮಾಧ್ಯಮಗಳಿಗೆ ನಿಜಕ್ಕೂ ವಾಸ್ತವಾಂಶ ಏನು ಎಂಬುದನ್ನು ಬಹಿರಂಗಪಡಿಸಲು ಸುತರಾಂ ಇಚ್ಛೆಯಿಲ್ಲ.
ಹಲವು ನಿದರ್ಶನಗಳು
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಟ ಸಲ್ಮಾನ್ ಖಾನ್ ಅವರ ತಂದೆ ಹಾಗೂ ಖ್ಯಾತ ಬಾಲಿವುಡ್ ಸಿನಿಮಾ ಸಾಹಿತ್ಯ ರಚನಾಕಾರ ಸಲೀಂಖಾನ್ ಹೇಳಿದ್ದು: `2002 ರ ಗುಜರಾತ್ ದಂಗೆಗಳಿಗಿಂತ ಕಡಿಮೆ ಸ್ವರೂಪದ್ದೇನೂ ಆಗಿರದ ಮುಂಬೈ ಗಲಭೆಗಳ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದವರು ಯಾವ ಪಕ್ಷಕ್ಕೆ ಸೇರಿದವರೆಂಬುದು ಗೊತ್ತೆ? ಉತ್ತರಪ್ರದೇಶದ ಮಲ್ಲಿಯಾನ ಮತ್ತು ಮೀರತ್‌ನಲ್ಲಿ ನಡೆದ ದಂಗೆಗಳ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದವರು ಯಾರು? ಬಿಹಾರದ ಭಾಗಲ್ಪುರ ಮತ್ತು ಜೆಮ್‌ಶೆಡ್‌ಪುರ ದಂಗೆಗಳ ಸಂದರ್ಭದಲ್ಲಿ ಬಿಹಾರದ ಮುಖ್ಯಮಂತ್ರಿಗಳಾಗಿದ್ದವರು ಯಾರು..? 2002ರ ಗುಜರಾತ್ ದಂಗೆಯನ್ನು ಸ್ವತಃ ನರೇಂದ್ರ ಮೋದಿಯವರೇ ನಿರ್ವಹಿಸಿದರೆಂದು ಬಿಂಬಿಸುತ್ತಾರಲ್ಲ, ಇದರಲ್ಲಿ ಸತ್ಯಾಂಶವೆಷ್ಟು? ವಾಸ್ತವವಾಗಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇಶವನ್ನೇ ಹಿಡಿದು ನಲುಗಿಸುತ್ತಿರುವ `ಒಡೆದು ಆಳುವ ನೀತಿ’ಗೆ ತಿಲಾಂಜಲಿ ನೀಡಿದ್ದಾರೆ. `ಸಮಗ್ರ ಅಭಿವೃದ್ಧಿ’ ಎಂಬ ಹೊಸ ಸೂತ್ರವನ್ನು ಅವರು ಜಾತ್ಯತೀತ ರಾಷ್ಟ್ರಕ್ಕೆ ಕೊಟ್ಟಿದ್ದಾರೆ. ಜಾತಿ, ಮತ, ಧರ್ಮಗಳ ಹಣೆಪಟ್ಟಿಯನ್ನು ತನ್ಮೂಲಕ ಅವರು ತೆಗೆದು ಹಾಕಿದ್ದಾರೆ’.
ಗುಜರಾತ್‌ನ ಇನ್ನೊಬ್ಬ ಖ್ಯಾತ ಮುಸ್ಲಿಂ ವಿದ್ವಾಂಸ ಮೌಲಾನಾ ವಸ್ತಾನ್ವಿ ಹೇಳಿದ್ದನ್ನು ಗಮನಿಸಿ: `ಮೋದಿ ಸರ್ಕಾರದ ಸಮಗ್ರ ಅಭಿವೃದ್ಧಿ ನೀತಿಯಿಂದ ಹೆಚ್ಚಿನ ಪ್ರಯೋಜವಾಗಿರುವುದು ಗುಜರಾತ್ ಮುಸ್ಲಿಮರಿಗೆ’. ಇನ್ನೊಬ್ಬ ಪ್ರಖ್ಯಾತ ಇಸ್ಲಾಂ ವಿದ್ವಾಂಸ, ಜಮಾತುಲ್ ಉಲೇಮಾ – ಇ – ಹಿಂದ್‌ನ ಮೌಲಾನ ಮೆಹಮೂದ್ ಮದನಿ `ಇತರ ರಾಜ್ಯಗಳಿಗೆ ಹೋಲಿಸಿದರೆ ಗುಜರಾತಿನಲ್ಲಿ ಮುಸ್ಲಿಮರು ಅತ್ಯಂತ ಸುಖಿಗಳು’ ಎಂದಿದ್ದಾರೆ. ಮಹಾರಾಷ್ಟ್ರದ ಮಾಜಿ ಐಜಿಪಿ ಎಸ್.ಎಂ.ಮುಶ್‌ರಿಫ್ ಇತ್ತೀಚೆಗೆ `ಮಿಲ್ಲಿ ಗಜೆಟ್’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದು: ‘Today the most safe place for Muslims is Gujarat’.
ಕೇರಳದ ವಿ.ವಿ. ಅಗಸ್ಟಿನ್ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಸದಸ್ಯರಾಗಿದ್ದರು. ಮೋದಿಯೊಂದಿಗೆ ಅವರದ್ದು ಅತ್ಯಂತ ಆಪ್ತ ಒಡನಾಟ. ಈ ಕುರಿತು ತನ್ನ ಅನುಭವವನ್ನು ಅವರು ದಾಖಲಿಸಿರುವುದು ಹೀಗೆ: `ಮೋದಿಯನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುತ್ತಿರುವವರು ಪೂರ್ವಗ್ರಹಪೀಡಿತರು. ನನ್ನ ಅನುಭವವಂತೂ ತೀರಾ ಭಿನ್ನವಾಗಿದೆ. ಗಂಭೀರ ಸಮಸ್ಯೆಗಳ ಕುರಿತು ಅವರು ಬಹಳ ಎಚ್ಚರಿಕೆಯಿಂದ ಎಲ್ಲವನ್ನೂ ಆಲಿಸುತ್ತಾರೆ ಮತ್ತು ಅಷ್ಟೇ ಶೀಘ್ರವಾಗಿ ಕಾರ್ಯನಿರತವಾಗುತ್ತಾರೆ. ಅಲ್ಪಸಂಖ್ಯಾತ ಆಯೋಗದ ಸದಸ್ಯನಾಗಿ ನಾನು ಹಲವಾರು ರಾಜ್ಯಗಳೊಂದಿಗೆ ವ್ಯವಹರಿಸಿದ್ದೇನೆ. ಒರಿಸ್ಸಾ, ಮಧ್ಯಪ್ರದೇಶ ಮತ್ತು ಬಿಹಾರ ಸರ್ಕಾರಗಳೂ ಕೂಡ ಈ ನಿಟ್ಟಿನಲ್ಲಿ ಉತ್ತಮವಾಗಿಯೇ ನಿರ್ವಹಿಸಿವೆ. ಆದರೆ ಯಾವುದೇ ಮುಖ್ಯಮಂತ್ರಿ ಮೋದಿಯಷ್ಟು ಸಾಮರ್ಥ್ಯ, ದೃಢಸಂಕಲ್ಪ ಹಾಗೂ ಒಳ್ಳೆಯತನವನ್ನು ಹೊಂದಿಲ್ಲ. ಇದೀಗ ಮುಸ್ಲಿಮರೂ ಕೂಡ ಮೋದಿ ಉತ್ತಮ ಆಡಳಿತಗಾರ ಎಂಬುದನ್ನು ಕಂಡುಕೊಂಡಿದ್ದಾರೆ. ಗುಜರಾತ್‌ನಲ್ಲಿ 2 ಬಗೆಯ ಮುಸ್ಲಿಮರಿದ್ದಾರೆ – ಶ್ರೀಮಂತರು ಹಾಗೂ ಬಡವರು. ಬಡವರೆಲ್ಲ ಮೋದಿಯ ಪರವಾಗಿದ್ದಾರೆ ಎಂಬುದು ನನ್ನ ಅನುಭವ. ಏಕೆಂದರೆ ದಂಗೆರಹಿತ ಗುಜರಾತ್ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಆ ರಾಜ್ಯ ಬಡ ಮುಸ್ಲಿಮರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸಿದೆ. ಬಡ ಮುಸ್ಲಿಮರ ಆರ್ಥಿಕತೆ ಕಳೆದೊಂದು ದಶಕದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಸತ್ಯ ಎಂದಿದ್ದರೂ ಸತ್ಯ. ಅದನ್ನು ನಾನು ಹೇಗೆ ನಿರಾಕರಿಸಲಿ?’
ಅಗಸ್ಟಿನ್ ಹೇಳಿದ್ದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಇದಕ್ಕೆ ಒಂದೇ ಒಂದು ನಿದರ್ಶನ ಸಾಕು. ಅಹಮದಾಬಾದಿನ ಸಬರ್ಮತಿ ನದೀ ದಡದ ಮೇಲಿನ Riverfront Project ಪರಿಣಾಮವಾಗಿ ಸುಮಾರು 13 ಸಾವಿರ ಕುಟುಂಬಗಳು ಮನೆಮಠ ಕಳೆದುಕೊಳ್ಳಬೇಕಾಯಿತು. ಈ ಪೈಕಿ ಶೇ. 68 ರಷ್ಟು ಮುಸ್ಲಿಂ ಕುಟುಂಬಗಳು. ಆದರೆ ಮೋದಿ ಹೀಗೆ ಬೀದಿಗೆ ಬಿದ್ದವರನ್ನು ಮರೆಯಲಿಲ್ಲ. ನಿರಾಶ್ರಿತರಾದ ಪ್ರತಿಯೊಂದು ಕುಟುಂಬಕ್ಕೂ ಸುಸಜ್ಜಿತ ಅಪಾರ್ಟ್‌ಮೆಂಟ್‌ನಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಮೊದಲಿಗಿಂತ ಈಗ ಅವರೆಲ್ಲ ಹೆಚ್ಚು ಸುಖಿಗಳು. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವಾಗ ಇವರು ಮುಸ್ಲಿಮರು, ಇವರು ಹಿಂದುಗಳೆಂದು ಮೋದಿ ಭೇದವೆಣಿಸಲಿಲ್ಲ. ಅಂತಹ ಸ್ವಭಾವವೂ ಅವರದ್ದಲ್ಲ.
ಒಮ್ಮೆ ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಮಹೇಶ್ ಭಟ್ ಜಮಾತುಲ್ ಉಲೇಮಾ-ಇ-ಹಿಂದ್ ವೇದಿಕೆಯ ಮೇಲೆ ಮಾತನಾಡುತ್ತಾ `ನರೇಂದ್ರ ಮೋದಿ, ಸುನ್ ರಹೇ ಹೋ? ಜಿಸ್ ಮಝಬ್ ಕೋ ತುಮ್ ಆಯೇ ದಿನ್ ಕಹತೇ ಹೋ ಕಿ ಯೇ ಆತಂಕ್‌ವಾದಿಯೋಂಕಿ ಗಂಗೋತ್ರಿ ಹೈ, ಉಸ್‌ಕೇ ರಸೂಲ್‌ನೇ ಕ್ಯಾ ಕಹಾ ಹೈ…’ ಎಂದರು. ಇದರ ಮರುದಿನವೇ ಮಹೇಶ್ ಭಟ್‌ಗೆ ಮೋದಿಯವರಿಂದ ಒಂದು ದೂರವಾಣಿ ಕರೆ ಬಂತು. `ಮಹೇಶ್ ಭಾಯಿ, ಮುಸಲ್ಮಾನ್ 5 ಆಯೇ 50 ಆಯೇ, 500 ಆಯೇ, 5000 ಆಯೇ, ಮೈ ಮಿಲ್‌ನೇ ಕೋ ತಯಾರ್ ಹೂಂ, ಮೈ ಆಪ್ ಕೀ ಸಾರಿ ಪ್ರಾಬ್ಲೆಮ್ಸ್ ಕೋ ಸಾಲ್ವ್ ಕರ್‍ನೇ ಕೇಲಿಯೇ ತಯಾರ್ ಹೂಂ. ಮೈ ಆಪ್ ಕೋ ಯೇ ಹೀ ಕಹನಾ ಚಾಹ್‌ತಾ ಹೂಂ ಕೀ ಮೈ ಅವೇಲಬಲ್ ಹೂಂ’. ಮಹೇಶ್ ಭಟ್ ಮೋದಿಯವರ ಈ ಸಂದೇಶವನ್ನು ಮುಸ್ಲಿಂ ಮುಖಂಡರಿಗೆ ರವಾನಿಸಿದರೆಂದು ಸುದ್ದಿ.
ಗುಜರಾತ್‌ನಲ್ಲಿ ಹಜ್ ಯಾತ್ರಿಕರಿಗಿರುವ ಅಧಿಕೃತ ಕೋಟಾ ಕೇವಲ 3,500. ಆದರೆ ಈಗಾಗಲೇ ಹಜ್ ಯಾತ್ರೆಗೆ ಅರ್ಜಿ ಹಾಕಿಕೊಂಡವರ ಸಂಖ್ಯೆ 41,000 ದಾಟಿದೆ. ಹಜ್ ಯಾತ್ರೆಗೆ ಹೋಗುವವರು ಸಾಧಾರಣವಾಗಿ ಆರ್ಥಿಕವಾಗಿ ಸಮೃದ್ಧಿ ಉಳ್ಳವರೆಂದೇ ಲೆಕ್ಕ. ಏಕೆಂದರೆ ಸಾಲ ಇರುವವರು ಹಾಗೂ ಇನ್ನಿತರ ಸಾಮಾಜಿಕ ಅಡೆತಡೆಗಳಿರುವವರು ಹಜ್ ಯಾತ್ರೆಗೆ ಹೋಗುವಂತಿಲ್ಲ. ಅವೆಲ್ಲವನ್ನೂ ಪೂರೈಸಿಯೇ ಅವರು ಯಾತ್ರೆಗೆ ಹೋಗಬೇಕು. ಗುಜರಾತ್‌ನಿಂದ ಮುಸ್ಲಿಮರು 41 ಸಾವಿರದಷ್ಟು ಸಂಖ್ಯೆಯಲ್ಲಿ ಹಜ್ ಯಾತ್ರೆಗೆ ಹೋಗುವಷ್ಟು ಆರ್ಥಿಕ ಸಮೃದ್ಧಿ ಸಾಧಿಸಿದ್ದಾರೆಂದರೆ ಅದು ಯಾರ ಕೊಡುಗೆ? ಯಾರು ಕಾರಣ?
ಇಡೀ ದೇಶದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ೨ ರಾಜ್ಯಗಳೆಂದರೆ ಗುಜರಾತಿನ ಕಛ್ ಮತ್ತು ಬರೂಚ್. ಇವೆರಡೂ ಜಿಲ್ಲೆಗಳು ಮುಸ್ಲಿಂ ಬಾಹುಳ್ಯ ಹೊಂದಿವೆ. ಕಛ್‌ನಲ್ಲಿ ಶೇ. 35 ರಷ್ಟು ಮುಸ್ಲಿಮರಿದ್ದರೆ, ಬರೂಚ್‌ನಲ್ಲಿ ಶೇ. 20 ರಷ್ಟು ಮುಸ್ಲಿಮರಿದ್ದಾರೆ. ಇದೇ ರೀತಿ ಗುಜರಾತಿನ ವಿವಿಧ ಆರ್.ಟಿ.ಒ. ಕಚೇರಿಗಳಲ್ಲಿ ನೋಂದಣಿಯಾಗುತ್ತಿರುವ ದ್ವಿಚಕ್ರ ವಾಹನಗಳಲ್ಲಿ ಶೇ. 18 ರಷ್ಟು ವಾಹನಗಳು ಮುಸ್ಲಿಮರದ್ದು. ಆದರೆ ಇಡೀ ಗುಜರಾತ್‌ನಲ್ಲಿ ಮುಸ್ಲಿಮರ ಶೇಕಡಾವಾರು ಪ್ರಮಾಣ ಶೇ. 10 ಕ್ಕಿಂತಲೂ ಕಡಿಮೆ! ಹಾಗೆಯೇ ಚತುಷ್ಚಕ್ರ ವಾಹನಗಳ ನೋಂದಣಿಯೂ ಹಿಂದುಗಳಿಗಿಂತ ಮುಸ್ಲಿಮರz ಅಧಿಕ. ಗುಜರಾತಿನ ಪೊಲೀಸ್ ಇಲಾಖೆಯಲ್ಲಿ ಶೇ. 12 ರಷ್ಟು ಮುಸ್ಲಿಂ ಉದ್ಯೋಗಿಗಳಿದ್ದಾರೆ. ರಾಜ್ಯ ಸರ್ಕಾರದ ನೌಕರಿಯಲ್ಲಿರುವ ಮುಸ್ಲಿಮರ ಸಂಖ್ಯೆ ಶೇ. 10 ರಷ್ಟು.
ಈ ಎಲ್ಲಾ ಮಾಹಿತಿಗಳು, ಅಂಕಿಅಂಶಗಳು ರವಾನಿಸುವ ಸಂದೇಶವಾದರೂ ಏನು? ಗುಜರಾತಿನಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಅಲ್ಲಿನ ಮುಸ್ಲಿಂ ಸಮುದಾಯ ನೆಮ್ಮದಿಯ ಬದುಕನ್ನು ಕಂಡುಕೊಂಡಿದೆ. ಅವರೆಲ್ಲರೂ ಹಿಂದೆಂದಿಗಿಂತ ಸುಖಿಗಳಾಗಿದ್ದಾರೆ ಎಂದಲ್ಲವೆ? ನಿಜ, ಮೋದಿ ಮುಖ್ಯಮಂತ್ರಿಯಾದ ಆರಂಭದಲ್ಲಿ ಅದೊಂದು ದುರದೃಷ್ಟಕರ ಘಟನೆ ನಡೆದು ಹೋಯಿತು. ಅದೂ ಕೂಡ `ಕ್ರಿಯೆ ತಕ್ಕ ಪ್ರತಿಕ್ರಿಯೆ’ ಆಗಿತ್ತೇ ಹೊರತು ಉದ್ದೇಶಪೂರ್ವಕವಾಗಿ ನಡೆದದ್ದಲ್ಲ. ಮೋದಿ ಮುಸ್ಲಿಂ ವಿರೋಧಿಯಾಗಿರುತ್ತಿದ್ದರೆ ಅವರು ಮುಸ್ಲಿಮರ ಒಳಿತಿಗಾಗಿ ಇಷ್ಟೆಲ್ಲ ಉತ್ತಮ ಕೆಲಸಗಳನ್ನು ಮಾಡುತ್ತಿದ್ದರೆ? ಮೋದಿ ಒಂದು ವೇಳೆ ದೇಶದ ಪ್ರಧಾನಿಯಾದರೆ ಗುಜರಾತಿನಂತೆಯೇ ಇಡೀ ದೇಶದಲ್ಲಿರುವ ಬಡ ಮುಸ್ಲಿಮರು ನೆಮ್ಮದಿಯ ದಿನಗಳನ್ನು ಕಾಣಬಹುದೆಂದು ಮುಸ್ಲಿಮರು ಯಾಕೆ ಯೋಚಿಸುತ್ತಿಲ್ಲ? ಯಾರೋ ಕೆಲವು ಎಡಬಿಡಂಗಿ, ವಿಚಾರವಾದಿಗಳು ಮೋದಿಯ ಬಗ್ಗೆ ಮಾಡುವ ಇಲ್ಲಸಲ್ಲದ ಅಪಪ್ರಚಾರಗಳನ್ನೇ ಮುಸ್ಲಿಂ ಸಮುದಾಯ ಏಕೆ ನಂಬಬೇಕು? ಕಳೆದ 6 ದಶಕಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ್ಯೂ ಇಡೀ ದೇಶದ ಮುಸ್ಲಿಮರ ಪಾಲಿಗೆ ಅದು ಸ್ವರ್ಗ ಸುಖವಿರಲಿ, ಕನಿಷ್ಠ ಜೀವನನಿರ್ವಹಣೆಗಾದರೂ ಅವಕಾಶ ಮಾಡಿಕೊಟ್ಟಿತೆ? ಈ ಪ್ರಶ್ನೆಯನ್ನು ಮುಸಲ್ಮಾನರು ತಮಗೆ ತಾವೇ ಕೇಳಿಕೊಳ್ಳಬೇಕಾಗಿದೆ.

Comments

  1. The so called pseudo secularists have the fear.so they are not ready to accept the truth.

    ReplyDelete

Post a Comment

Popular posts from this blog

ಪ್ರಧಾನಿ ಮೋದಿಜೀ ಪ್ರಣಬ್ ಮುಖರ್ಜಿಯವರಿಗೆ ಬರೆದ ಪತ್ರ