ಟೈಗರ್ ಹಿಲ್ಸ್ ಗೆದ್ದ ಟೈಗರ್‌ಗಳಿಗೆ ನಮನ

Thanks To News13.
ಕಾರ್ಗಿಲ್ ಕದನ. ಅದೊಂದು ಭಾರತದ ಇತಿಹಾಸದಲ್ಲಿ ಮರೆಯಲಾರದ ಯುದ್ಧ. ಭಾರತ-ಪಾಕಿಸ್ತಾನಗಳ ನಡುವೆ ನಡೆದ ನಾಲ್ಕನೇ ಯುದ್ಧ. ಉಭಯ ದೇಶಗಳ ನಡುವೆ ಸುಧಾರಿಸಲಾರದಷ್ಟು ಸಂಬಂಧ ಹಳಸಿದೆ ಎನ್ನುವುದಕ್ಕೆ ಈ ಯುದ್ಧಗಳು ನಿದರ್ಶನ.
ಮುಂದಿನ ಪೀಳಿಗೆ ನಮ್ಮ ಚರಿತ್ರೆಯ ಪುಟಗಳನ್ನು ತಿರುವಿ ಈ ಯುದ್ಧದ ವಿವರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಬಹುದು. ಏಕೆಂದರೆ ಈ ಯುದ್ಧ ಅಷ್ಟು ರೋಚಕವಾಗಿತ್ತು. ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿರುವ ಕಾರ್ಗಿಲ್ ಈ ಹಿಂದೆ ಒಂದು ಜಿಲ್ಲಾಕೇಂದ್ರದ ಹೆಸರಾಗಿ ಉಳಿದಿತ್ತು. ದೇಶವಾಸಿಗಳಿಗೆ ಆ ಹೆಸರು ಅಷ್ಟೇನೂ ಪರಿಚಿತವಾಗಿರಲಿಲ್ಲ. ಆದರೆ ಈಗ ಕಾರ್ಗಿಲ್ ಎಂದ ಕೂಡಲೇ ದೇಶವಾಸಿಗಳ ನರನಾಡಿಗಳಲ್ಲಿ ಅದೇನೋ ಅವ್ಯಕ್ತ ಭಾವನೆಗಳ ಸಂಚಾರವಾಗುತ್ತದೆ. ಹಲವು ತೆರನಾದ ಭಾವನೆಗಳು ಉಕ್ಕಿ ಹರಿಯುತ್ತವೆ. ವಂಚನೆ, ಉದ್ವಿಗ್ನತೆ, ಕೋಪ, ದುಃಖ, ನಿರ್ಧಾರ, ಸಾಹಸ, ಪರಾಕ್ರಮ, ವಿಜಯ, ಸಂಭ್ರಮ – ಹೀಗೆ ಹತ್ತು ಹಲವು ಭಾವನೆಗಳು ಅನುರಣಿಸುತ್ತವೆ.
1999 ರ ಮೇ 8 ರಿಂದ ಜುಲೈ 14 ರವರೆಗೆ ನಡೆದ ಆ 74 ದಿನಗಳು, ದೇಶಾದ್ಯಂತ ಪೂರ್ತಿ ಕಾರ್ಗಿಲ್ ಯುದ್ಧದ್ದೇ ಸುದ್ದಿ. ಮಾಧ್ಯಮಗಳಲ್ಲಿ, ಟಿವಿ ಚಾನೆಲ್‌ಗಳಲ್ಲಿ ಯುದ್ಧದ ಸುದ್ದಿಗಳಿಗೇ ಆದ್ಯತೆ. ಉಳಿದೆಲ್ಲ ಕಾರ್ಯಕ್ರಮಗಳು ಮೂಲೆಗೆ. ಏನಾಯಿತು ಕಾರ್ಗಿಲ್‌ನಲ್ಲಿ ? ಇವತ್ತು ಪಾಕ್ ಶತ್ರುಗಳೆಷ್ಟು ಮಂದಿ ಸತ್ತರು ? ಭಾರತೀಯ ಸೇನೆ ಹೊಸದಾಗಿ ಯಾವ ಪ್ರದೇಶ ವಶಪಡಿಸಿಕೊಂಡಿತು ? ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಜೊತೆಗೆ ಹೋರಾಟದಲ್ಲಿ ಹುತಾತ್ಮರಾದ ವೀರ ಯೋಧರ ಸುದ್ದಿ ಕೇಳಿ ಕಣ್ಣೀರು ಮಿಡಿದವರೆಷ್ಟೋ. ಯುದ್ಧ ಮುಗಿಯುವವರೆಗೆ ದೇಶ ತನ್ನೆಲ್ಲ ಮಾಮೂಲು ಸಮಸ್ಯೆಗಳನ್ನು ಬದಿಗಿಟ್ಟು ಕಾರ್ಗಿಲ್ ಕದನದ ಸುದ್ದಿಗಳಿಗಾಗಿ ಕಣ್ಣು, ಕಿವಿ ತೆರೆದು ಕುಳಿತಿದ್ದಂತೂ ನಿಜ. ಹಿಂದೆಂದೂ ಕಾಣದಂತಹ ಏಕತೆ ಈ ಯುದ್ಧದ ಸಂದರ್ಭದಲ್ಲಿ ಕಂಡುಬಂತು.
ಇದೇನು ನಾವಾಗಿ ಬಯಸಿದ ಯುದ್ಧವಲ್ಲ. ಕಾಲು ಕೆರೆದು, ಜಗಳ ತೆಗೆದು ನಾವಾಗಿ ಯುದ್ಧವನ್ನು ಮೈಮೇಲೆ ಎಳೆದುಕೊಂಡದ್ದಲ್ಲ. ನಿಜವಾಗಿ ಹೇಳುವುದಾದರೆ, ಲಾಹೋರ್‌ಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಸ್ ಯಾತ್ರೆ ಕೈಗೊಂಡ ಬಳಿಕ ಉಭಯ ದೇಶಗಳ ನಡುವೆ ಹೊಸದೊಂದು ಭಾಯಿ-ಭಾಯಿ ಶಕೆಯೇ ಆರಂಭವಾಗಬಹುದೆಂದು ಭಾವಿಸಲಾಗಿತ್ತು. ಜಂಗ್ ನ ಹೋನೇ ದೇಂಗೇ (ಯುದ್ಧ ಆಗಲು ಬಿಡುವುದಿಲ್ಲ) ಎಂದು ವಾಜಪೇಯಿ ಅವರು ಫೆಬ್ರವರಿ 21 ರಂದು ಲಾಹೋರ್‌ನಲ್ಲಿ ಪ್ರಧಾನಿ ನವಾಜ್ ಶರೀಫ್ ಭೇಟಿಯ ಬಳಿಕ ಘೋಷಿಸಿದ್ದರು. ಅದರಂತೆಯೇ ಅವರು ನಡೆದುಕೊಂಡರು.
ಆದರೆ ಆಗಿದ್ದೇ ಬೇರೆ. ಇಡೀ ಜಗತ್ತೇ ಬದಲಾವಣೆಯ ಹಾದಿ ತುಳಿಯುತ್ತಿದ್ದರೂ ಪಾಕಿಸ್ಥಾನ ಮಾತ್ರ ಭಾರತದ ವಿರುದ್ಧದ ತನ್ನ ದ್ವೇಷ ಭಾವನೆ ತೊರೆಯಲಿಲ್ಲ. ಆಕ್ರಮಣಕಾರಿ ಪ್ರವೃತ್ತಿಯನ್ನು ಅದು ಮರೆಯಲಿಲ್ಲ. ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಕುಲುಕಿದ ಅದು ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರ್‌ನಲ್ಲಿ ನವಾಜ್ ಶರೀಫ್ ವಾಜಪೇಯಿ ಅವರು ಕೈಕುಲುಕುತ್ತಿರುವಾಗ ಇತ್ತ ಕಾರ್ಗಿಲ್, ಬಟಾಲಿಕ್, ದ್ರಾಸ್, ಮುಷ್ಕೊ ಕಣಿವೆಯುದ್ಧಕ್ಕೂ ಗಡಿನಿಯಂತ್ರಣ ರೇಖೆ ಅತಿಕ್ರಮಿಸಿ ಪಾಕ್ ಸೈನಿಕರು, ಮುಜಾಹಿದ್ದೀನ್ ಬಾಡಿಗೆ ಬಂಟರು ಅಡಗುದಾಣ ರಚಿಸಿಕೊಳ್ಳತೊಡಗಿದ್ದರು. ಯುದ್ಧದ ಸಿದ್ಧತೆ ಸಾಗಿತ್ತು. ಭಾರತದ ಸ್ನೇಹಕ್ಕೆ ಪಾಕ್ ನೀಡಿದ ಬೆಲೆ ಇಂತಹದು !
3
ಭಾರತ ಮಾನಸಿಕವಾಗಿ ಯುದ್ಧಕ್ಕೆ ಖಂಡಿತ ಸಿದ್ಧವಾಗಿರಲಿಲ್ಲ. ಅತಿಕ್ರಮಣಕಾರಿಗಳು ಗಡಿನಿಯಂತ್ರಣ ರೇಖೆ ದಾಟಿ ನಮ್ಮ ಸೇನೆಯ ಮೇಲೆ ದಾಳಿ ನಡೆಸಿದಾಗ ಇಡೀ ದೇಶವೇ ಆಘಾತಗೊಂಡಿತು. ಅನಿರೀಕ್ಷಿತ ದಾಳಿಗೆ ನಮ್ಮ ಕೆಲವು ಸೈನಿಕರೂ ಪ್ರಾರಂಭದಲ್ಲಿ ಬಲಿಯಾದರು. ಆದರೆ ಆನಂತರ ನಡೆದದ್ದೇ ಬೇರೆ. ಮೈ ಕೊಡವಿ ಮೇಲೆದ್ದ ನಮ್ಮ ಸೈನ್ಯ ಶತ್ರುಗಳನ್ನು ಸದೆಬಡಿದು ಗಡಿಯಾಚೆ ತೊಲಗಿಸುವವರೆಗೆ ವಿಶ್ರಮಿಸಲಿಲ್ಲ. ಸೀಮಿತ ಯುದ್ಧೋಪಕರಣ, ಪ್ರತಿಕೂಲ ಹವೆ, ಪಾಕ್ ವೈರಿ ಪಡೆಯ ಅತ್ಯಾಧುನಿಕ ಶಸ್ತ್ರಾಸ್ತ್ರಗಳು – ಯಾವುದಕ್ಕೂ ನಮ್ಮ ಯೋಧರು ಹೆದರಿ ಕಂಗೆಡಲಿಲ್ಲ. ಕೊರೆಯುವ ವಿಪರೀತ ಚಳಿಯಲ್ಲಿ ಪಂಡಿತ್ ನೆಹರು ವ್ಯಂಗ್ಯವಾಗಿ ಹೇಳುತ್ತಿದ್ದ ಒಂದಿಂಚೂ ಹುಲ್ಲು ಬೆಳೆಯದ ಪ್ರದೇಶದಲ್ಲಿ ನಮ್ಮ ಯೋಧರು ಅವಿತರವಾಗಿ ಶತ್ರುಪಡೆಯ ವಿರುದ್ಧ ಸೆಣಸಿದರು. ಕೊನೆಗೂ ವಿಜಯಲಕ್ಷ್ಮಿ ಒಲಿದದ್ದು ನಮಗೇ.
ಸಾಧನಗಳ ಕೊರತೆಗಳು ನಮ್ಮ ಧೀರ ಯೋಧರನ್ನು ಕಾಡಲಿಲ್ಲ. ಧೈರ್ಯ, ಪರಾಕ್ರಮ, ದೃಢ ನಿರ್ಧಾರಗಳೇ ಅವರ ಪ್ರಬಲ ಅಸ್ತ್ರಗಳಾದವು. ಆ ಅಸ್ತ್ರಗಳ ಮುಂದೆ ಪಾಕಿಗಳ ಬೇಳೆ ಬೇಯಲಿಲ್ಲ. ಬಹುಶಃ ಜಗತ್ತಿನಲ್ಲೇ ಇದೊಂದು ಕಠಿಣತಮ ಯುದ್ಧ ಆಗಿರಬಹುದು. ದುರ್ಗಮ ಪರ್ವತದೆತ್ತರವನ್ನು ಕಷ್ಟಪಟ್ಟು ಏರಿ ಹೋರಾಡಿದ ನಮ್ಮ ಇನ್‌ಫೆಂಟ್ರಿಗೆ ವಿಶ್ರಾಂತಿಯೆಂಬುದೇ ಇರಲಿಲ್ಲ. ಕೆಲವು ಬಾರಿ ಇಡೀ ರಾತ್ರಿ ಯುದ್ಧ ಮಾಡಬೇಕಾಗಿ ಬಂದರೆ ಇನ್ನು ಕೆಲವು ಸಲ 36 ಗಂಟೆಗಳ ಕಾಲ ಶತ್ರುಪಡೆಯೊಂದಿಗೆ ಸೆಣಸಿದ ಸಂದರ್ಭಗಳೂ ಉಂಟು. ಭೂಸೈನ್ಯದ ಜೊತೆ ಆರ್ಟಿಲರಿ ಹಾಗೂ ವಾಯುದಳ ಕೂಡ ಹೋರಾಡಿತು. ಸೇನೆಯ ವೈದ್ಯಾಧಿಕಾರಿಗಳು ಅಸುರಕ್ಷಿತ ಬಂಕರ್‌ಗಳಲ್ಲಿ ಗಾಯಗೊಂಡು ಕುಸಿದುಬಿದ್ದಿದ್ದ 584 ಕ್ಕೂ ಹೆಚ್ಚು ಯೋಧರ ಶುಶ್ರೂಷೆಯಲ್ಲಿ ಹಗಲಿರುಳೂ ಶ್ರಮಿಸಿದರು. ಭಾರತ ಸೇನೆ ಇದುವರೆಗೆ ಕಂಡ ಅತ್ಯಂತ ಕಠಿಣ ಯುದ್ಧವಿದಾಗಿತ್ತು. ಈ ಯುದ್ಧದಲ್ಲಿ ಒಂದೋ ಹೋರಾಡಬೇಕಿತ್ತು, ಇಲ್ಲವೇ ಹೋರಾಡುತ್ತಾ ಮಡಿಯಬೇಕಾಗಿತ್ತು. ಬೇರೆ ಅವಕಾಶವೇ ಅವರಲ್ಲಿರಲಿಲ್ಲ. ಹಿಮ್ಮೆಟ್ಟುವ ಸಾಧ್ಯತೆಯಂತೂ ಇರಲೇ ಇಲ್ಲ. ಜುಲೈ 14 ರಂದು ವಿಜಯ್ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಾಗ ತ್ರಿವರ್ಣಧ್ವಜ ರಕ್ತದಲ್ಲಿ ಸಂಪೂರ್ಣ ತೊಯ್ದು ಕೆಂಪಾಗಿತ್ತು. ಜುಲೈ 14 ರಂದು ಅಟಲ್ ಬಿಹಾರಿ ವಾಜಪೇಯಿಯವರು ಆಪರೇಷನ್ ವಿಜಯ್ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಆದರೆ ಕಾರ್ಗಿಲ್ ಯುದ್ಧ ಅಧಿಕೃತವಾಗಿ ಮುಕ್ತಾಯಗೊಂಡಿದ್ದು, ಭಾರತೀಯ ಸೇನೆ ಪಾಕ್ ನುಸುಳುಕೋರರನ್ನು ಸಂಪೂರ್ಣವಾಗಿ ಹೊರದಬ್ಬಲಾಗಿದೆ ಎಂದು ಘೋಷಿಸಿದ ದಿನ ಜುಲೈ 26 ರಂದು. ಆದ್ದರಿಂದ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತದೆ.
1
ಕಾರ್ಗಿಲ್ ಕದನ ಇಡೀ ದೇಶದ ಮಾನಸಿಕತೆಯ ಮೇಲೆ ಆಳವಾದ ಮುದ್ರೆಯೊತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಲಡಾಖ್‌ನಿಂದ ನಾಗಾಲ್ಯಾಂಡ್‌ವರೆಗೆ ದೇಶದುದ್ದಗಲಕ್ಕೆ ದೇಶಭಕ್ತಿಯ ಪ್ರವಾಹವೇ ಹರಿದಿದೆ. ಯುದ್ಧದಲ್ಲಿ ಹುತಾತ್ಮರಾದ ವೀರಯೋಧರನ್ನು ಇಡೀ ದೇಶ ಹೀರೋಗಳಂತೆ ಕಂಡು ಗೌರವ ಸಲ್ಲಿಸಿದೆ, ಆರಾಧಿಸಿದೆ. ಜಾತಿ, ಮತ, ಧರ್ಮ, ಪ್ರಾಂತ, ಭಾಷೆ ಯಾವುದೂ ಇದಕ್ಕೆ ಅಡ್ಡಿಯಾಗಲಿಲ್ಲವೆನ್ನುವುದು ವಿಶೇಷ. ದೆಹಲಿಯ ಸಮೀಪವಿರುವ ನೊಯ್ಡಾಕ್ಕೆ ಲೆಫ್ಟಿನೆಂಟ್ ವೈಜಯಂತ್ ಥಾಪರ್ ಅವರ ಪಾರ್ಥಿವ ಶರೀರ ಆಗಮಿಸಿದಾಗ, ಅವರ ಅಂತ್ಯಕ್ರಿಯೆಗಾಗಿ ಇಡೀ ಊರು ತನ್ನ ವ್ಯವಹಾರಗಳನ್ನು ಸ್ಥಗಿತಗೊಳಿಸಿತ್ತು. ದಲಿತ ಜಾತಿಗೆ ಸೇರಿದ ಸಿಪಾಯಿ ದಿನೇಶ್ ವಘೇಲಾರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವೇಳೆ ಗುಜರಾತಿನ ಖೇಡಾ ಜಿಲ್ಲೆಯ ನಿರ್ಮಲಿ ಗ್ರಾಮದ ಎಲ್ಲ ಜಾತಿಯವರೂ ಒಟ್ಟಾಗಿ ಸೇರಿ ಆತನ ವೀರಮರಣಕ್ಕೆ ಕಣ್ಣೀರು ಹಾಕಿದರು. ಆ ಯೋಧನ ಪರಾಕ್ರಮಕ್ಕೆ ಅವರೆಲ್ಲ ಹೆಮ್ಮೆಪಟ್ಟರು. ಈ ಯುದ್ಧ ಇಡೀ ದೇಶವನ್ನೇ ಒಂದುಗೂಡಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಟೈಗರ್ ಹಿಲ್ಸ್, ತೊಲೊಲಿಂಗ್ ಹಿಮಪರ್ವತಗಳು ಸಿಖ್ಖರು, ಪಂಜಾಬಿಗಳು, ಗೂರ್ಖರು, ಬಿಹಾರಿಗಳು, ನಾಗಾಗಳು, ಬಂಗಾಲಿಗಳು, ಮಲೆಯಾಳಿಗಳು, ಮರಾಠರು, ಜಾಟರು, ಕನ್ನಡಿಗರು, ತಮಿಳರು… ಹೀಗೆ ಎಲ್ಲರ ರಕ್ತದಿಂದ ತೊಯ್ದಿದೆ. ಈ ರಕ್ತದ ಕಲೆಗಳ ಮೇಲೆ ಮತ್ತೆ ಚಳಿಗಾಲದಲ್ಲಿ ಹಿಮ ಹರಡಿಕೊಳ್ಳಲಿದೆ. ಆದರೆ ಅವರೆಲ್ಲರ ತ್ಯಾಗ, ಬಲಿದಾನಗಳು ಎಂದಿಗೂ ಅಳಿಯಲಾರವು. ಭಾರತಕ್ಕೆ ಅದೆಂತಹ ಅದಮ್ಯ ಶಕ್ತಿ ಇದೆಯೆಂದು ಚರಿತ್ರೆ ಓದಿದ ಮುಂದಿನ ಪೀಳಿಗೆಗೆ ಖಂಡಿತ ಆಶ್ಚರ್ಯಚಕಿತವಾಗದೇ ಇರದು. ಭಾರತದ ಆತ್ಮಶಕ್ತಿ ಸುಪ್ತವಾಗಿರಬಹುದು. ಆದರೆ ಸಮಯ ಬಂದಾಗ ಅದು ಜಾಗೃತವಾಗಿ ಇಡೀ ದೇಶವನ್ನು ಬಡಿದೆಬ್ಬಿಸಬಲ್ಲದೆಂಬುದಕ್ಕೆ ಕಾರ್ಗಿಲ್ ಕದನ ಒಂದು ಜ್ವಲಂತ ಸಾಕ್ಷಿ.
2
ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು, ಅದರ ಕೆಳಗೊಂದು ವಾಕ್ಯ :
ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ : ನಿಮ್ಮ ನಾಳೆಗಳಿಗೆ ನಾವು ನಮ್ಮ ಈ ದಿನಗಳನ್ನು ತ್ಯಾಗ ಮಾಡಿದ್ದೇವೆ.
ಈ ಕೆತ್ತನೆ ಈಗ ಮಳೆಗೆ ತೊಯ್ದು ಚಳಿ, ಗಾಳಿಗೆ ತೊಯ್ದು ಮಸುಕಾಗಿದೆ. ಬರಹ ಮಸುಕಾದರೇನು ? ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ಯೋಧರ ವೀರಗಾಥೆ ಇಂದಿಗೂ ಅಕ್ಷರಶಃ ಈ ಮಾತನ್ನು ಮಾತ್ರ ನೆನಪಿಸುತ್ತಿದೆ. ಕಾರ್ಗಿಲ್ ಕದನ ಭೂಮಿಯಿಂದ ಹೆಣವಾಗಿ ಹುಟ್ಟೂರಿಗೆ ಪೆಟ್ಟಿಗೆಯಲ್ಲಿ ಬಂದ ಪ್ರತಿಯೊಬ್ಬ ಯೋಧರು ನಮ್ಮೆಲ್ಲರ ನಾಳೆಗಳಿಗಾಗಿ ತಮ್ಮ ಈ ದಿನಗಳನ್ನು ಬಲಿದಾನ ಮಾಡಿದ್ದಾರೆ.
ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ, ಟಿ. ವಿ. ಚಾನೆಲ್‌ಗಳಲ್ಲಿ ಜಾಹೀರಾತೊಂದು ತೇಲಿಬರುತ್ತಿತ್ತು. ‘They didn’t go down fighting for their lives in Kargil : but for ours’ ಅದರ ಹಿಂದೆಯೇ ಮತ್ತೊಂದು ವಾಕ್ಯ ತೇಲಿಬರುತ್ತಿತ್ತು. ‘They die for a stranger. And that stranger is you.’
ನಿಜ, ಕಾರ್ಗಿಲ್ ಕದನದಲ್ಲಿ ಸುಮಾರು 527 ಕ್ಕೂ ಹೆಚ್ಚು ವೀರ ಯೋಧರು ನಮಗಾಗಿ, ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಸುಮಾರು 1,363 ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು. ಈಗಲೂ ಅನೇಕರು ದೇಶಕ್ಕಾಗಿ ಹುತಾತ್ಮರಾಗುತ್ತಲೇ ಇದ್ದಾರೆ. ಹದಿನೆಂಟು ಸಹಸ್ರ ಅಡಿಯೆತ್ತರಕ್ಕೆ ತಲುಪಿ ವೈರಿಪಡೆಯನ್ನು ಚೆಂಡಾಡುವುದು ಅಷ್ಟು ಸುಲಭವೇನಲ್ಲ. ಭಾರತೀಯ ಸೈನ್ಯ ಇದುವರೆಗೆ ಕಾದಾಡಿದ ಕದನಗಳಲ್ಲಿ ಕಾರ್ಗಿಲ್ ಸಮರ ಅತ್ಯಂತ ಕಠಿಣವಾದುದು. 1965 ಹಾಗೂ 1971 ರಲ್ಲಿದ್ದಂತೆ ಈ ಬಾರಿ ಇನ್‌ಫ್ರೆಂಟಿಯನ್ನು ಬೆಂಬಲಿಸುವ ಟ್ಯಾಂಕುಗಳಿಲ್ಲ. ಗತಪ್ರಾಣನಾಗಿ ಬಿದ್ದಾಗ ವಾಯುದಳದ ನೆರವು ಕೋರುವಂತಿರಲಿಲ್ಲ. ಯುದ್ಧರಂಗದಿಂದ ತಪ್ಪಿಸಿಕೊಂಡು ಸುರಕ್ಷಿತ ತಾಣಕ್ಕೆ ತಲುಪುವ ಪ್ರಶ್ನೆಯೇ ಈ ಬಾರಿ ಇರಲಿಲ್ಲ. ಹಾಗೆಂದೇ ಕಾರ್ಗಿಲ್ ಯುದ್ಧಕ್ಕೆ ತೆರಳಿದ ನಮ್ಮ ಸೈನಿಕರೊಬ್ಬೊಬ್ಬರದ್ದೂ ಒಂದೊಂದು ಸಾಹಸಗಾಥೆ. ಇವರಲ್ಲದೆ ರಾಷ್ಟ್ರಕ್ಕೆ ಪ್ರಾಣದೀವಿಗೆಯಾಗಿ ತಾಯ್ನಾಡಿಗಾಗಿ ತಲೆಯೊಡ್ಡಿದವರು ಇನ್ನೆಷ್ಟೋ … ಅಂತಹ ಎಲ್ಲಾ ಮಹಾನ್ ಚೇತನಗಳಿಗೆ ನಮ್ಮ ಶತಶತ ನಮನಗಳು.
ಈ ವಿಜಯ ದಿವಸದ ನೆನಪಿನೊಂದಿಗೆ ಸಮಾಜದಲ್ಲಿರುವ ಪ್ರತಿಯೊಬ್ಬ ಯುವಕರೂ ಸೈನಿಕರಂತೆ ದೇಶ, ಧರ್ಮ ರಕ್ಷಣೆಗೆ ತಮ್ಮ ಕರ್ತವ್ಯವನ್ನು ಪಾಲಿಸಿದಲ್ಲಿ ಸ್ವಸ್ಥ ಸಮಾಜದೊಂದಿಗೆ ಸುಭದ್ರ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.
ಪ್ರತಿಯೊಬ್ಬ ಯುವಕರು ನಾಡಿನ ರಕ್ಷಣೆಗೆ ಮುಂದಾಗುತ್ತಾ ಸೈನಿಕರು ಗಡಿಯಲ್ಲಿ ನಾಡ ರಕ್ಷಣೆ ಮಾಡಿದಂತೆ ಹಾಗೂ ಸೈನಿಕರು ಶತ್ರುಗಳನ್ನು ದೇಶದಿಂದ ಹೊರಗಟ್ಟಿ ಈ ವಿಜಯದಿವಸ ಆಚರಣೆ ಮಾಡಿದ ರೀತಿಯಲ್ಲಿ ನಾವೆಲ್ಲರೂ ಸೇರಿ ಸಮಾಜದ ಸೈನಿಕರಾಗಿ ಸಮಾಜದಲ್ಲಿರುವ ದುಷ್ಟಶಕ್ತಿಗಳನ್ನು ಹೊರಗಟ್ಟುವ ಸಂಕಲ್ಪ ಮಾಡೋಣ.
ಆಧಾರ : ಕಾರ್ಗಿಲ್ ಕಂಪನ

Comments

Popular posts from this blog

ಪ್ರಧಾನಿ ಮೋದಿಜೀ ಪ್ರಣಬ್ ಮುಖರ್ಜಿಯವರಿಗೆ ಬರೆದ ಪತ್ರ