ಪ್ರಧಾನಿ ಮೋದಿಜೀ ಪ್ರಣಬ್ ಮುಖರ್ಜಿಯವರಿಗೆ ಬರೆದ ಪತ್ರ




ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಟ್ವಿಟರ್’ನಲ್ಲಿ ಸಕ್ರಿಯರಾಗಿರುವ ಮಾಜಿ ರಾಷ್ಟ್ರಪತಿ  ಪ್ರಣಬ್ ಮುಖರ್ಜಿ, ತನ್ನ ಅಧಿಕಾರಾವಧಿಯ ಕೊನೆಯ ದಿನ ಪ್ರಧಾನಿ ಮೋದಿ ಬರೆದಿದ್ದ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಬರೆದಿದ್ದ ಪತ್ರ ಬಹಳ ಹೃದಯಸ್ಪರ್ಶಿಯಾಗಿದೆ, ಆದುದರಿಂದ ನಾನದನ್ನು ನಿಮ್ಮೆಲ್ಲರ ಬಳಿ ಹಂಚಿಕೊಳ್ಳುತ್ತಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಜುಲೈ 24ರಂದು ಬರೆದಿರುವ ಪತ್ರದಲ್ಲಿ ಪ್ರಧಾನಿ ಮೋದಿ, ಪ್ರಣಬ್ ಮುಖರ್ಜಿಯವರನ್ನು ತಂದೆ-ಸಮಾನ, ಗುರು ಎಂದು ಕರೆದಿದ್ದು, ಅವರ ವಿದ್ವತ್ತು, ಸಹಕಾರ ಹಾಗೂ ಮಾರ್ಗದರ್ಶನಗಳನ್ನು ಕೊಂಡಾಡಿದ್ದಾರೆ.

ನಾನು ದೆಹಲಿಗೆ ಒಬ್ಬ ವಲಸಿಗನಂತೆ ಬಂದಿದ್ದೆ. ನನ್ನ ಮುಂದೆ ಬಹಳಷ್ಟು ಕಠಿಣ ಸವಾಲುಗಳಿದ್ದವು. ಆ ಸಂದರ್ಭದಲ್ಲಿ ನೀವು ನನ್ನ ತಂದೆ ಸಮಾನರಾಗಿ, ಗುರುವಾಗಿ ಮುನ್ನಡೆಸಿದ್ದೀರಿ.  ನಿಮ್ಮ ವಿದ್ವತ್ತು, ಮಾರ್ಗದರ್ಶನ ಹಾಗೂ ಸಹಕಾರಗಳು ನನ್ನಲ್ಲಿ ಆತ್ಮವಿಶ್ವಾಸ ಹಾಗೂ ಬಲವನ್ನು ತುಂಬಿದ್ದವು, ಎಂದು ಮೋದಿ ಆ ಪತ್ರದಲ್ಲಿ ಬರೆದಿದ್ದಾರೆ.

ಆಡಳಿತ, ರಾಜಕೀಯ, ವಿದೇಶ ವ್ಯವಹಾರ, ಸುರಕ್ಷತೆ ಮುಂತಾದ ಪ್ರತಿಯೊಂದು ವಿಷಯಗಳಲ್ಲಿ ನಿಮಗಿರುವ ಅಗಾಧ ತಿಳುವಳಿಕೆ ಹಾಗೂ ಅನುಭವ ವಿಸ್ಮಿತಗೊಳಿಸುವಂಥದ್ದು. ನಿಮ್ಮ ಮೇಧಾವಿತನವು ನನಗೆ ಹಾಗೂ ಸರ್ಕಾರಕ್ಕೆ ನಿರಂತರವಾಗಿ ನೆರವು ನೀಡಿದೆ, ಎಂದು ಮೋದಿ ಬರೆದಿದ್ದಾರೆ.

‘ನೀವು ನಿಮ್ಮ ಆರೋಗ್ಯದ ಕಡೆ ಗಮನಹರಿಸುತ್ತಿದ್ದೀರಲ್ಲವೇ?’ ಎಂಬ ನಿಮ್ಮ ಆತ್ಮೀಯ ಫೋನ್ ಕರೆಗಳು ನಾನು ಎಲ್ಲಿದ್ದರೂ ನನ್ನಲ್ಲಿ ನವ ಚೈತನ್ಯವನ್ನು ತುಂಬುತಿತ್ತು, ಎಂದು ಮೋದಿ ಪತ್ರದಲ್ಲಿ ನೆನಪಿಸಿಕೊಂಡಿದ್ದಾರೆ.

ಪ್ರಣಬ್’ರನ್ನು ಪ್ರಣಬ್ ದಾ ಎಂದು ಸಂಬೋಧಿಸಿ, ‘ನಾವಿಬ್ಬರು ಬೇರೆ ಬೇರೆ ರಾಜಕೀಯ ಸಿದ್ಧಾಂತ ಹಾಗೂ ಪಕ್ಷಗಳಿಂದ ಬಂದವರು ಹಾಗೂ ನಮ್ಮ ಅನುಭವಗಳು ಬೇರೆ ಬೇರೆಯಾಗಿದ್ದವು. ನನಗೆ ರಾಜ್ಯದ ಆಡಳಿತದ ಅನುಭವವಿತ್ತು, ಆದರೆ ನೀವು ದೇಶದ ರಾಜಕೀಯ ಹಾಗೂ ಆಡಳಿತದ ವಿವಿಧ ಮಗ್ಗುಲುಗಳ ಬಗ್ಗೆ ಹೊಂದಿದ್ದ ಅಗಾಧ ಅರಿವು ಹಾಗೂ ಅನುಭವದಿಂದಾಗಿ ನಾವು ಒಟ್ಟೋಟ್ಟಾಗಿ ಕೆಲಸ ಮಾಡಲು ಸಾಧ್ಯವಾಯಿತು’ ಎಂದು ಮೋದಿ ಮುಖರ್ಜಿಯವರ ಧೀಮಂತಿಕೆಯನ್ನು ಸ್ಮರಿಸಿದ್ದಾರೆ.

ನಿಮ್ಮ ಸುದೀರ್ಘ ರಾಜಕೀಯ  ಜೀವನದಲ್ಲಿ ದೇಶವನ್ನು ಬೇರೆ ಎಲ್ಲದಿಕ್ಕಿಂತ ಮಿಗಿಲಾಗಿ ಕಂಡವರು. ನಿಮ್ಮ ಅವಧಿಯಲ್ಲಿ ರಾಷ್ಷ್ರಪತಿ ಭವನವು ನೂತನ ಯೋಜನೆಗಳಿಗೆ ಹಾಗೂ ದೇಶದ ಯುವಜನತೆಗಳ ಪ್ರತಿಭೆಗೆ ವೇದಿಕೆಯನ್ನು ಒದಗಿಸಿದ್ದವು, ಎಂದು ಮೋದಿ ಹೇಳಿದ್ದಾರೆ.

ದೇಶವು ಕಂಡ ಅಪರೂಪದ ಅಸಾಮಾನ್ಯ ನಾಯಕರಲ್ಲಿ ನೀವೊಬ್ಬರು. ನಿಸ್ವಾರ್ಥ ರಾಜಕಾರಣ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದೀರಿ.ದೇಶದ ಜನತೆಗೆ ಸ್ಫೂರ್ತಿಯ ಮೂಲವಾಗಿದ್ದೀರಿ. ದೇಶವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಪ್ರಣಬ್ ಮುಖರ್ಜಿಯವರ ಕೊಡುಗೆಯನ್ನು ಪ್ರಶಂಸಿದ್ದಾರೆ.

ಕೊನೆಗೆ ಪ್ರಣಬ್’ರ ಸಹಕಾರ, ಮಾರ್ಗದರ್ಶನಕ್ಕೆ ಧನ್ಯವಾದ ಸಲ್ಲಿಸಿರುವ ಮೋದಿ, ತಮ್ಮಂತಹ ರಾಷ್ಟ್ರಪತಿಯೊಂದಿಗೆ ಪ್ರಧಾನಿಯಾಗಿ ಕೆಲಸ ಮಾಡುವುದೇ ಬಹಳ ಹೆಮ್ಮೆಯ ಸಂಗತಿ ಎಂದು ಬರೆದಿದ್ದಾರೆ.  
Courtesy Suvarna News 24X7

Comments

Popular posts from this blog

ಟೈಗರ್ ಹಿಲ್ಸ್ ಗೆದ್ದ ಟೈಗರ್‌ಗಳಿಗೆ ನಮನ

ಭಗವದ್ಗೀತೆ