ಇಂದು ಶ್ಯಾಮಪ್ರಸಾದ್‌ ಮುಖರ್ಜಿ, ವಿ.ಎಸ್‌. ಆಚಾರ್ಯ ಜನ್ಮದಿನ

  • ಇಂದು ಶ್ಯಾಮಪ್ರಸಾದ್‌ ಮುಖರ್ಜಿ, ವಿ.ಎಸ್‌. ಆಚಾರ್ಯ ಜನ್ಮದಿನ

    • by Udayavani | Jul 06, 2013
      "ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ರಾಷ್ಟ್ರ ಧ್ವಜಗಳಿದ್ದರೆ ಅದು ರಾಷ್ಟ್ರೀಯತೆಗೆ ಅಪಮಾನ ಮತ್ತು ಅಪಚಾರ' -ಹೀಗೆಂದು ಲೋಕಸಭೆಯಲ್ಲಿ ಘರ್ಜಿಸಿದ ಭಾರತದ ಪಾರ್ಲಿಮೆಂಟಿನ ಸಿಂಹವೇ ಡಾ| ಶ್ಯಾಮಪ್ರಸಾದ್‌ ಮುಖರ್ಜಿ.
      1950ರ ದಶಕದ ಆರಂಭದ ವರ್ಷಗಳಲ್ಲಿ ಭಾರತದ ಸಾರ್ವಭೌಮತೆಯ ಸಂಕೇತವಾದ ಸಂಸತ್ತಿನಲ್ಲಿ ಆಳುವ ಸರಕಾರದ ದುರ್ಬಲ ನೀತಿಗಳನ್ನು ತನ್ನ ನೇರ ಹಾಗೂ ಹರಿತವಾದ ಭಾಷಣ, ನಿರ್ದಾಕ್ಷಿಣ್ಯದ ಮುಕ್ತ ಶಬ್ದಗಳಿಂದ ಖಂಡಿಸುತ್ತಾ ಭಾರತದ ಅಂದಿನ ಪ್ರಧಾನಿ ನೆಹರೂ ಅವರನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದ್ದ ಭಾರತದ ಕೇಸರಿಯೇ ಅಪ್ಪಟ ರಾಷ್ಟ್ರಭಕ್ತ ಡಾ| ಮುಖರ್ಜಿ.ಕೋಲ್ಕತ್ತದ ಅಶುತೋಷ್‌ ರಸ್ತೆಯ 77ನೇ ನಂಬರ್‌ ಮನೆಯಲ್ಲಿ 1901ರ ಜು.6 ರಂದು ಮುಖರ್ಜಿ ಜನಿಸಿದರು. ವಿದ್ಯಾರ್ಥಿ ಜೀವನ ದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಬದುಕಿದರು, ಸಹಪಾಠಿಗಳಲ್ಲಿ ರಾಷ್ಟ್ರಾಭಿಮಾನ ಉಕ್ಕುವಂತೆ ವರ್ತಿಸುತ್ತಿದ್ದರು.ಉನ್ನತ ಶಿಕ್ಷಣ ಪಡೆದ ಮುಖರ್ಜಿ ತಮ್ಮ 33ನೇ ವರ್ಷದಲ್ಲಿ ಕೋಲ್ಕತ್ತಾ ವಿವಿಯ ಉಪಕುಲಪತಿಯಾಗಿ ನೇಮಕಗೊಂಡು ಈ ಘನಹುದ್ದೆ ಅಲಂಕರಿಸಿದ ಅತಿ ಕಿರಿಯನೆಂಬ ದಾಖಲೆ ನಿರ್ಮಿಸಿದರು.ತಾವು ನಂಬಿದ ಸಿದ್ಧಾಂತದೆದುರು ಕೇಂದ್ರದ ಮಂತ್ರಿಸ್ಥಾನವೂ
      ಸೇರಿದಂತೆ ಎಲ್ಲಾ ಅಧಿಕಾರಗಳೂ ಮುಖರ್ಜಿಯವರಿಗೆ ತೃಣ ಸಮಾನವಾಗಿದ್ದವು.
      ಸ್ವತಂತ್ರ ಭಾರತದ ನೆಲ- ಜಲ -ಆತ್ಮಗೌರವದ ರಕ್ಷಣೆಗೆ ಸಿಡಿದು ನಿಂತು ಸಂತ್ರಸ್ತ ಭಾರತೀಯರ ಪರವಾಗಿ ಗುಡುಗುತ್ತಿದ್ದ ಮುಖರ್ಜಿಯವರನ್ನು ಗಮನಿಸಿ ಮಹಾತ್ಮಾ ಗಾಂಧೀಜಿಯವರು, "ಹಾಲಾಹಲವನ್ನು ಕುಡಿದ ಶಿವನಂತೆ ಭಾರತದ ರಾಜಕೀಯ ವಿಷ ಕುಡಿದು ಅರಗಿಸಿಕೊಳ್ಳುವ ಸಾಮರ್ಥ್ಯವಿರುವ ಆಧುನಿಕ ಶಿವ ನೀವು' ಎಂದು ಉದ್ಗರಿಸಿದ್ದರಂತೆ. ರಾಷ್ಟ್ರಭಕ್ತ ಡಾ| ಶ್ಯಾಮಪ್ರಸಾದ್‌ ಮುಖರ್ಜಿಯವರ ಜನ್ಮ ದಿನವೇ ಅವರ ಮೆಚ್ಚಿನ ಅನುಯಾಯಿ ಹಾಗೂ ದೀನದಯಾಳಜೀ ಅವರ ಆದರ್ಶಗಳನ್ನು ಮೆಚ್ಚಿ, ತನ್ನ ಯೌವನದ ದಿನಗಳಲ್ಲಿ ಜನಸಂಘದ ಸಿದ್ಧಾಂತಕ್ಕೆ ಮನಸೋತು ಮುಂದೆ 5 ದಶಕಗಳ ಕಾಲ ಕರಾವಳಿ ಕರ್ನಾಟಕವೂ ಸೇರಿದಂತೆ ರಾಜ್ಯ, ದೇಶದಲ್ಲಿ ಮೌಲ್ಯಾಧಾರಿತ ರಾಜಕಾರಣ ಮಾಡಿದ ಡಾ| ವೇದವ್ಯಾಸ ಶ್ರೀನಿವಾಸ ಆಚಾರ್ಯರ ಜನ್ಮದಿನವೂ ಹೌದು ಎನ್ನುವುದು ಹೆಮ್ಮೆಯ ವಿಚಾರ.
       ಕಡಲ ತಡಿಯ ಜಿಲ್ಲೆ ಉಡುಪಿಯ ಒಂದು ತುದಿಯಲ್ಲಿ ನಿಂತು ತನ್ನ ಪರಿಶುದ್ಧ ಜೀವನದ ಮೂಲಕವೇ ಸಾರ್ವಜನಿಕರ ಜೀವನದಲ್ಲಿ ಗಗನದೆತ್ತರಕ್ಕೆ ಬೆಳೆದ ಡಾ| ವಿ. ಎಸ್‌. ಆಚಾರ್ಯ ಒಬ್ಬ ಆದರ್ಶ ರಾಜಕಾರಣಿ. ಅಚ್ಚರಿಯ ವಿಷಯವೆಂದರೆ ಕರ್ನಾಟಕ ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ಅಧಿಕಾರದಲ್ಲಿರಲಿ, ಯಾರೇ ಮುಖ್ಯ ಮಂತ್ರಿಯಾಗಲಿ ಆಡಳಿತಾತ್ಮಕ ವಿಷಯದಲ್ಲಿ ಆಚಾರ್ಯರ ಅನುಭವಪೂರ್ಣ ಸಲಹೆ ಪಡೆಯದ ವ್ಯಕ್ತಿಗಳು ಮತ್ತು ಪಕ್ಷಗಳಿಲ್ಲ.ಒಮ್ಮೆ ಮೇಲ್ಮನೆಯ ಸದಸ್ಯರಾಗಿ ಡಾ| ಆಚಾರ್ಯರ ಅವಧಿ ಮುಕ್ತಾಯವಾಗಿ ಅವರುನಿವೃತ್ತರಾಗುವವರಿದ್ದರು. ಆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ "ಮೇಲ್ಮನೆಯ ಸದಸ್ಯ ಡಾ| ಆಚಾರ್ಯರು ಯಾವುದೇ ಪಕ್ಷದಲ್ಲಿದ್ದರೂ ಮತ್ತೂಮ್ಮೆ ಆಯ್ಕೆಯಾಗಿ ಸದನಕ್ಕೆ ಬರಲಿ. ಇಂತಹ ಮಾನವ ಕಂಪ್ಯೂಟರ್‌ ಮೆದುಳು ಸದನಕ್ಕೆ ಶೋಭೆ. ಅವರಿಲ್ಲದ ಸದನವನ್ನು ಸಹಿಸುವ ಶಕ್ತಿ ನನಗಿಲ್ಲ' ಎಂದಿದ್ದರು. ಒಬ್ಬ ಅರ್ಥಶಾಸ್ತ್ರಜ್ಞ, ಶಿಕ್ಷಣತಜ್ಞ, ಪತ್ರಿಕೋದ್ಯಮಿ, ಸಾಹಿತಿ, ಉತ್ತಮ ರಾಜತಾಂತ್ರಿಕ ಹಾಗೂ ಸ್ವತಃ ವೈದ್ಯರಾದ ಡಾ| ಆಚಾರ್ಯರು ವೈದ್ಯಕೀಯ ಶಿಕ್ಷಣ ಮಂತ್ರಿಯಾಗಿ ಮಾಡಿದ ಸಾಧನೆ ರಾಜ್ಯಕ್ಕೆ ಮಾದರಿ.
      ಮೇಲ್ವರ್ಗದ ಬ್ರಾಹ್ಮಣ ಕುಲದಲ್ಲಿ ಜನಿಸಿದ ಆಚಾರ್ಯರು ಎಂತಹ ಸಾಮಾಜಿಕ ನ್ಯಾಯ ಬದ್ಧರಾಗಿದ್ದರೆಂದರೆ 1968ರಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದಾಗ ದೇಶದಲ್ಲೇ
      ಪ್ರಥಮ ಬಾರಿಗೆ ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧ ಮಾಡಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು.ಇಂದಿನ ಸಾರ್ವಜನಿಕ ಜೀವನ ಬಹಳ ಸುಖಮಯವಾಗಿದೆ. ಯಾವುದೇ ಜನಪರ ಹೋರಾಟವಾಗಲಿ, ಜನರ ನೋವು- ನಲಿವು ಗಳನ್ನು ಅರ್ಥ ಮಾಡಿಕೊಂಡು ಸಮಷ್ಟಿ ಹಿತಕ್ಕಾಗಿ ರೂಪಿಸಿದ ಚಳುವಳಿ ಯಾಗಲಿ ಇಲ್ಲದೆ ಕೇವಲ ಹಣಬಲದ ಮೇಲೆ ಜನಪ್ರತಿನಿಧಿಗಳಾಗಬಹುದು ಎಂದುಕೊಂಡವರಿಗೆ ಡಾ| ವಿ. ಎಸ್‌. ಆಚಾರ್ಯ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ವಿರೋಧಿಸಿ 18 ತಿಂಗಳು
      ಜೈಲಿನಲ್ಲಿದ್ದರು ಎಂಬುದು ನಂಬುವುದೇ ಕಷ್ಟ.ಆಚಾರ್ಯರದ್ದು ತುಂಬು ಜೀವನ. ಅವರ ಯಶಸ್ವೀ ತುಂಬು
      ಜೀವನದುದ್ದಕ್ಕೂ ನೆರಳಂತೆ ಹಿಂಬಾಲಿಸಿದ ಅವರ ಪತ್ನಿ ಶಾಂತಕ್ಕನ ಬದುಕು ಸಾರ್ಥಕ.
      ಸಾರ್ವಜನಿಕ ಜೀವನ ಹಾಗೂ ರಾಷ್ಟ್ರ ಸೇವೆಗೆ ತಮ್ಮ ಬದುಕನ್ನು ಸಮರ್ಪಣೆ ಮಾಡಿದ ಎರಡು ಹಿರಿಯ ಜೀವಗಳಾದ ಡಾ| ಶ್ಯಾಮಪ್ರಸಾದ್‌ ಮುಖರ್ಜಿ ಹಾಗೂ ಡಾ| ವಿ. ಎಸ್‌. ಆಚಾರ್ಯರ ಜನ್ಮದಿನ ಜುಲೈ 6 ಎಂಬುದು ಬೆಚ್ಚನೆಯ ನೆನಪು. ಡಾ| ಶ್ಯಾಮಪ್ರಸಾದ್‌ ಮುಖರ್ಜಿಯವರು ತಮ್ಮ ಬದುಕಿನ ಕೊನೆಯ ದಿನಗಳನ್ನು ರಾಷ್ಟ್ರದ ಏಕತೆಯ ಕೂಗಿಗೆ ಧ್ವನಿಗೂಡಿಸಲು ಮುಡಿಪಿಟ್ಟರು. ಜಮ್ಮು ಕಾಶ್ಮೀರದ ಜನತೆ ಭಾರತದ ನೆಲದೊಂದಿಗೆ ತಮ್ಮ ಬದುಕು ಬೆಸೆಯಲು ಧ್ವನಿಯೆತ್ತಿದಾಗ ಅಂದಿನ ಕಾಂಗ್ರೆಸ್‌ ಸರಕಾರದ ನಿರ್ಲಿಪ್ತತೆಯನ್ನು ಕಂಡು ಸಿಡಿದೆದ್ದ ಮುಖರ್ಜಿ ಕಾಶ್ಮೀರ ಜನರ ದನಿಯಾಗಿ ಜಮ್ಮುವಿಗೆ ಪ್ರಯಾಣ ಬೆಳೆಸಿದರು. ಆದರೆ ಭಾರತ ಸರಕಾರ ಅವರಿಗೆ ಅನುಮತಿ ನಿರಾಕರಿಸಿತು.ಡಾ| ಮುಖರ್ಜಿ ಜಮ್ಮು ಪ್ರವೇಶಿಸುತ್ತಲೇ ಕಾಶ್ಮೀರದ ಜಿಲ್ಲಾಧಿಕಾರಿ ಅವರನ್ನು ಬಂಧಿಸಿದರು. ಮತ್ತದೇ ಸೆರೆಮನೆ ವಾಸ. ಜೈಲಿನೊಳಗೆ ಕಾಯಿಲೆಬಿದ್ದ ಡಾ| ಶ್ಯಾಮಪ್ರಸಾದ್‌ ಮುಖರ್ಜಿ 1953ರ ಜೂ.23ರಂದು ಇಹಲೋಕ ತ್ಯಜಿಸಿದರು.ಡಾ| ಆಚಾರ್ಯರು ಕರ್ನಾಟಕದ ಗೃಹ ಮಂತ್ರಿಯಾಗಿದ್ದ ಸಂದರ್ಭ. ಅವರ ಶಕ್ತಿಯ ಅರಿವಿಲ್ಲದ ಕೆಲವರು ಗೃಹಮಂತ್ರಿಯೆಂದರೆ ಗಡಸುತನವಿರಬೇಕು, ಆಚಾರ್ಯರಂತಹ ಮಗು ಮನಸ್ಸಿನವರಿಗೆ
      ಈ ಖಾತೆ ಹೇಳಿಸಿದ್ದಲ್ಲ ಎಂದಿದ್ದರು. ಆದರೆ ನಿರೀಕ್ಷೆಗಳನ್ನು ಸುಳ್ಳು ಮಾಡಿ ಡಾ| ಆಚಾರ್ಯ ಸುದೀರ್ಘ‌ ಕಾಲ ಗೃಹಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳು, "ಹೀಗೆ ಪೊಲೀಸ್‌ ಇಲಾಖೆಯ ನಾಡಿಮಿಡಿತ ಅರ್ಥ ಮಾಡಿಕೊಂಡು ಕೆಲಸ ಮಾಡಿದ ಮತ್ತೂಬ್ಬ ಗೃಹಮಂತ್ರಿಯನ್ನು ನಾವು ಕಂಡಿಲ್ಲ. ಶುದ್ಧ ಹಸ್ತದ ಮಂತ್ರಿ ಇವರಾದ್ದರಿಂದ ವಸೂಲಿ ದಂಧೆಯಿಂದ ದೂರ ಉಳಿಯುವಂತಾಯಿತು ಹಾಗೂ ಇದರಿಂದ ನಮ್ಮ ಇಲಾಖೆಯ ಸ್ವಾಭಿಮಾನ ಮತ್ತು ಗೌರವ ಹೆಚ್ಚಿತು' ಎಂದು ಹೊಗಳುತ್ತಿದ್ದರು.
      ಡಾ| ಆಚಾರ್ಯ 2012ರ ಫೆ.14ರಂದು ಉಡುಪಿಯಿಂದ ಹೊರಟು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಸರಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲಿ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
      ಬದುಕಿನುದ್ದಕ್ಕೂ ಸಮಯ ಪ್ರಜ್ಞೆ ಉಳಿಸಿಕೊಂಡಿದ್ದ ಡಾ| ಆಚಾರ್ಯ ಅಂದು ನಿಗದಿತ ಕಾರ್ಯಕ್ರಮಕ್ಕೆ ಬರುವುದು ತಡವಾದ್ದರಿಂದ ಲಗುಬಗನೆ ವೇದಿಕೆಯೇರಿದ್ದರು. ವೇದಿಕೆಯಲ್ಲೇ ಕುಸಿದು ಬಿದ್ದ
      ಆಚಾರ್ಯರನ್ನು ಸನಿಹದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಅನಂತದಲ್ಲಿ ಲೀನವಾಗಿತ್ತು.ತಮ್ಮ ಬದುಕಿನ ದಿನದಿನಗಳನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ಈ
      ಎರಡು ಮಹಾನ್‌ ಜೀವಗಳು ಮೂಡಿಸಿದ ಗುರುತುಳಿಯುವ ಹೆಜ್ಜೆಗಳು ಮುಂದಿನ ಜನಾಂಗಕ್ಕೆ ದಾರಿದೀಪವಾಗಬೇಕು.
      ವಿಧಾನ ಪರಿಷತ್‌ ಸದಸ್ಯರು
      ಹಾಗೂ ಮಾಜಿ ಸಚಿವರು
      „ಕೋಟ ಶ್ರೀನಿವಾಸ ಪೂಜಾರಿ
      ಅಭಿಮತ

Comments

Popular posts from this blog

ಪ್ರಧಾನಿ ಮೋದಿಜೀ ಪ್ರಣಬ್ ಮುಖರ್ಜಿಯವರಿಗೆ ಬರೆದ ಪತ್ರ