ಇಫ್ತಾರ್ ಕೂಟದಲ್ಲಿ ಕ್ಯಾಪ್ ಹಾಕಿಕೊಂಡವರೆಲ್ಲಾ ಮುಸಲ್ಮಾನರಿಗೆ ಹಾಕಿದ್ದೂ ಟೋಪಿಯನ್ನೇ ಮಿಸ್ಟರ್ ನಿತೀಶ್‌ಕುಮಾರ್!

- ಪ್ರತಾಪ್ ಸಿಂಹ

ಬೆತ್ತಲೆ ಪ್ರಪಂಚ
ಟೋಪಿ ಔರ್ ತಿಲಕ್!
ಕಳೆದ ಏಪ್ರಿಲ್‌ನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಯವರನ್ನು ಪರೋಕ್ಷವಾಗಿ ಕುಟುಕುತ್ತಾ, "ಕಭಿ ಟೋಪಿ ಭಿ ಪಹನ್ನಾ ಪಡ್ತಾ ಹೈ, ಕಭಿ ಟಿಕಾ ಭಿ ಲಗಾನಾ ಪಡ್ತಾ ಹೈ", ಅಂದರೆ ಕೆಲವೊಮ್ಮೆ ಟೋಪಿಯನ್ನೂ(ಮುಸಲ್ಮಾನರ) ಹಾಕಬೇಕಾಗುತ್ತದೆ, ತಿಲಕವನ್ನೂ(ಹಿಂದುಗಳ) ಇಟ್ಟುಕೊಳ್ಳಬೇಕಾಗುತ್ತದೆ ಎಂದಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರರ ನಿಜ ಬಣ್ಣ, ಉದ್ದೇಶ ಬಯಲಾಗಿತ್ತು. ಮುಂದುವರೆದು, "ಕೇವಲ್ ಹವಾ ಬನಾನೆ ಸೆ ಕುಛ್ ನಹೀ ಹೋಗಾ" ಎಂದಾಗಲಂತೂ ಅವರು ನರೇಂದ್ರ ಮೋದಿಯವರ ಬಗ್ಗೆ ಮತ್ಸರ ಹೊಂದಿದ್ದಾರೆ  ಮಾತ್ರವಲ್ಲ, ಸ್ವತಃ ಪ್ರಧಾನಿಯಾಗ ಬೇಕೇಂಬ ಮಹತ್ವಾಕಾಂಕ್ಷೆಯನ್ನೂ ಹೊಂದಿದ್ದಾರೆ ಎಂಬುದೂ ಸ್ಪಷ್ಟವಾಗಿ ಗೋಚರಿಸಿತ್ತು.
ಹೀಗಾಗಿ...
ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನರೇಂದ್ರ ಮೋದಿಯವರನ್ನು ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿದಾಗ, "ಅದು ಬಿಜೆಪಿಯ ಆಂತರಿಕ ವಿಚಾರ" ಎಂದು ಪ್ರಾರಂಭದಲ್ಲಿ ಹೇಳಿದ್ದ ಜೆಡಿಯು, ಆಡ್ವಾಣಿ ಪ್ರಹಸನ ಹಾಗೂ ಕುಮ್ಮಕ್ಕಿನ ನಂತರ ಮತ್ತೆ ಮೋದಿ ವಿಚಾರದಲ್ಲಿ ತಗಾದೆ ತೆಗೆದು 17 ವರ್ಷಗಳ ಮೈತ್ರಿಯನ್ನೇ ಮುರಿದು ಹೊರ ನಡೆದಿದೆ.
ಆದರೆ ಈ ನಿತೀಶ್‌ಕುಮಾರರ ಮಾತು ನಡತೆಗಳ ಹಿಂದಿನ ಉದ್ದೇಶ, ಅರ್ಥವಾದರೂ ಏನು?
2003ರಲ್ಲಿ ಗುಜರಾತ್ ಮುಖ್ಯಮಂತ್ರಿಯನ್ನು ಹಾಡಿ ಹೊಗಳಿದ್ದ, ನೀವು ರಾಷ್ಟ್ರರಾಜಕಾರಣಕ್ಕೆ ಬರಬೇಕು ಎಂದು ಸಾರ್ವಜನಿಕವಾಗಿ ಹೇಳಿದ್ದ, ಗುಜರಾತ್ ಹಿಂಸಾಚಾರದ ನಂತರ ಬಿಜೆಪಿ ತೊರೆದ ರಾಮ್ ವಿಲಾಸ್ ಪಾಸ್ವಾನರನ್ನು "ಅವಕಾಶವಾದಿ" ಎಂದಿದ್ದ, 2005ರ ಬಿಹಾರ ಚುನಾವಣೆ ಸಂದರ್ಭದಲ್ಲಿ "ಅನಗತ್ಯವಾಗಿ ಗುಜರಾತ್ ಹಿಂಸಾಚಾರವನ್ನು ಎಳೆದು ತಂದು ರಾಜಕೀಯ ಮಾಡಲಾಗುತ್ತಿದೆ. ಈ ಆಟ ಮತ್ತೆ ಮತ್ತೆ ನಡೆಯದು" ಎಂದಿದ್ದ ನಿತೀಶ್ ಕುಮಾರ್ ಯಾವಾಗ ಸೆಕ್ಯುಲರ್‌ವಾದಿಯಾಗಿ ಪರಿವರ್ತನೆಯಾದರು? ಬಿಜೆಪಿಯ ಸಹಾಯ ಪಡೆದು ಏಳು ವರ್ಷಗಳ ಕಾಲ ಅಧಿಕಾರ ಅನುಭವಿಸುವವರೆಗೂ ಇರದಿದ್ದ ಸೆಕ್ಯುಲರ್ ಚಿಂತೆ ಈಗ ಹೇಗೆ ಆರಂಭವಾಯಿತು?
ಇಷ್ಟಕ್ಕೂ ನಿತೀಶ್ ಕುಮಾರ್ ಮಾದರಿ ಅಥವಾ ಬ್ರ್ಯಾಂಡ್ ಆಫ್ ಸೆಕ್ಯುಲರಿಸಂ ಆದರೂ ಯಾವುದು?
ನಿಮ್ಮ ಪ್ರಕಾರ ಕೆಲವೊಮ್ಮೆ ಟೋಪಿಯನ್ನೂ ಹಾಕಿಕೊಳ್ಳಬೇಕಾಗುತ್ತದೆ, ತಿಲಕವನ್ನೂ ಇಟ್ಟುಕೊಳ್ಳಬೇಕಾಗುತ್ತದೆ ಎಂದರೇನು ನಿತೀಶ್? ಒಂದು ವೇಳೆ, 2011ರಲ್ಲಿ ನಡೆದ ಸದ್ಭಾವನಾ ಸಮಾವೇಶಗಳ ಸಂದರ್ಭದಲ್ಲಿ ನರೇಂದ್ರ ಮೋದಿ ಸ್ಕಲ್ ಕ್ಯಾಪ್ ಹಾಕಿಕೊಂಡಿದ್ದರೆ "ಸೆಕ್ಯುಲರ್‌" ಆಗಿಬಿಡುತ್ತಿದ್ದರೆ? ಅಥವಾ ನೀವು ಅವರನ್ನು ಸೆಕ್ಯುಲರ್ ಎಂದು ಒಪ್ಪಿಕೊಂಡು ಬಿಡುತ್ತಿದ್ದಿರೇ? ಅಥವಾ ಟೋಪಿ ಹಾಕಿಕೊಳ್ಳುವ ಮೂಲಕವೇ ತಮ್ಮ ಜಾತ್ಯತೀತತೆಯನ್ನು, ಧರ್ಮನಿರಪೇಕ್ಷತೆಯನ್ನು ನರೇಂದ್ರ ಮೋದಿ ಅಥವಾ ಹಿಂದುಗಳು ತೋರಿಸಬೇಕು ಎನ್ನುವುದಾದರೆ ಯಾವ ಮುಸಲ್ಮಾನ ನಾಯಕರು ತಿಲಕವಿಟ್ಟುಕೊಂಡು ತಾವು ಸೆಕ್ಯುಲರ್ ಎಂದು ಸಾಬೀತುಪಡಿಸಿದ್ದಾರೆ ಮೊದಲು ತೋರಿಸಿ ನೋಡೋಣ??
ಅದಿರಲಿ, ಹಿಂದುಗಳಷ್ಟೇ ಏಕೆ ತಮ್ಮ ವೇಷ-ಭೂಷಣಗಳಲ್ಲಿ, ಆಚರಣೆ-ತೋರಿಕೆಯಲ್ಲಿ ಜಾತ್ಯತೀತತೆಯನ್ನು ತೋರಬೇಕು?
ನಮ್ಮ ಪ್ರಧಾನಿ ಹಾಗೂ ಬಹುತೇಕ ಎಲ್ಲ ರಾಜ್ಯಗಳ ಹಿಂದು ಮುಖ್ಯಮಂತ್ರಿಗಳೂ ಪ್ರತಿ ವರ್ಷವೂ ಇಫ್ತಾರ್ ಕೂಟ ಏರ್ಪಡಿಸಿ, ಟೋಪಿ ಧರಿಸಿ ಮುಸಲ್ಮಾನರನ್ನು ಸಂತುಷ್ಟಪಡಿಸಲು ಯತ್ನಿಸುತ್ತಾರೆ. ಆದರೆ ಕೇರಳದ ಮುಖ್ಯಮಂತ್ರಿ ಉಮ್ಮೆನ್ ಚಾಂಡಿ(ಕ್ರೈಸ್ತ), ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ(ಮುಸ್ಲಿಂ) ಎಂದಾದರೂ ನಮ್ಮ ದೀಪಾವಳಿ, ಗಣೇಶ ಚತುರ್ಥಿಯನ್ನು ತಮ್ಮ ಮುಖ್ಯಮಂತ್ರಿ ನಿವಾಸದಲ್ಲಿ ಆಚರಿಸಿದ್ದಾರಾ? ಕ್ರೈಸ್ತರೇ ತುಂಬಿರುವ ನಾಗಾಲ್ಯಾಂಡ್‌ನ ಮುಖ್ಯಮಂತ್ರಿ ಎಂದಾದರೂ ಹಿಂದು ಹಬ್ಬಹರಿದಿನವನ್ನು ಆಚರಿಸಿದ್ದನ್ನು ಕಂಡಿದ್ದೀರಾ? ಈ ಹಿಂದೆ ದೇಶದ ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿದ್ದ ಅಬ್ದುರ್ ರೆಹಮಾನ್ ಅಂಟುಳೆ, ಫಾರುಕ್ ಅಬ್ದುಲ್ಲಾ, ಮುಫ್ತಿ ಮೊಹಮ್ಮದ್ ಸಯೀದ್ ದೀಪಾವಳಿ ಆಚರಿಸಿದ್ದನ್ನು ಕಂಡು-ಕೇಳಿದ್ದೀರಾ? ಅಷ್ಟೇಕೆ, ಮಗಳು ಸಾರಾ ಅಬ್ದುಲ್ಲಾ ಕಾಂಗ್ರೆಸ್ ನಾಯಕ, ದಿವಂಗತ ರಾಜೇಶ್ ಪೈಲಟ್‌ರ ಮಗ ಸಚಿನ್ ಪೈಲಟ್‌ರನ್ನು ವರಿಸಿದಾಗ ಫಾರುಕ್ ಅಬ್ದುಲ್ಲಾ ಮದುವೆಗೇ ಹೋಗಲಿಲ್ಲ! ಮಗಳು ಹಿಂದುವನ್ನು ಮದುವೆಯಾಗುತ್ತಿರುವಾಗ ತಾನು ಹೋದರೆ ಮುಸಲ್ಮಾನರು ಮುನಿಸಿಕೊಳ್ಳುತ್ತಾರೆ, ಮುಂದಿನ ಚುನಾವಣೆಯಲ್ಲಿ ವೋಟು ಬೀಳುವುದಿಲ್ಲ ಎಂಬ ಹೆದರಿಕೆಯೇ ಅದಕ್ಕೆ ಕಾರಣವಲ್ಲವೆ? ಹಾಗಾದರೆ ಸೆಕ್ಯುಲರ್ ಎಂದು ಸಾಬೀತುಪಡಿಸಿಕೊಳ್ಳಬೇಕಾಗಿರುವುದು ಯಾರು? ಹಿಂದುಗಳೋ ಅಥವಾ ಮುಸಲ್ಮಾನರಾದಿಯಾಗಿ ಉಳಿದ ಅಲ್ಪಸಂಖ್ಯಾತರೋ? ಇದೇ ಫಾರುಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಅಂಟುಳೆ, ಸಲ್ಮಾನ್ ಖುರ್ಷಿದ್, ಸಮಾಜವಾದಿ ಪಕ್ಷದ ಕಮಾಲ್ ಫಾರುಕಿ, ಅಝಮ್ ಖಾನ್ ಅಥವಾ ಶಾಹಿದ್ ಸಿದ್ಧಿಕಿ, ಕರ್ನಾಟಕದ ರೋಷನ್ ಬೇಗ್, ಜಮೀರ್, ಕಮರುಲ್ಲಾ ಇಸ್ಲಾಂ ಹಣೆಯಲ್ಲಿ ಯಾವತ್ತಾದರೂ ತಿಲಕವನ್ನು ನೋಡಿದ್ದೀರಾ? ಒಮ್ಮೆ ಹೈದರಾಬಾದ್‌ನ ಅಸಾದುದ್ದೀನ್ ಓವೈಸಿ, ಅಕ್ಬರುದ್ದೀನ್ ಓವೈಸಿ ಹಣೆಗೆ ತಿಲಕವಿಡಲು ಹೋಗಿ ನೋಡಿ?
ಹಾಗಾದರೆ ಬರೀ ಹಿಂದು ನಾಯಕರೇ ತಮ್ಮ ಸೆಕ್ಯುಲರ್ ಧೋರಣೆಯನ್ನು ಸಾಬೀತು ಮಾಡಬೇಕಾ?
ಸ್ವಾಮಿ ನಿತೀಶ್ ಕುಮಾರರೇ, ಮೋದಿಯನ್ನು ಕೋಮುವಾದಿ ಎನ್ನುತ್ತಿರುವ, ಜರಿಯುತ್ತಿರುವ ನಿಮಗೆ ಬಾಬರಿ ಮಸೀದಿ ನೆಲಸಮ ಚಳವಳಿಯ ರೂವಾರಿ ಲಾಲ್ ಕೃಷ್ಣ ಆಡ್ವಾಣಿಯವರು ಯಾವ್ ಆ್ಯಂಗಲ್‌ನಲ್ಲಿ ಈಗ ಸೆಕ್ಯುಲರ್ ಆಗಿ ಕಾಣುತ್ತಿದ್ದಾರೆ?! ಗುಜರಾತ್‌ನಲ್ಲಿ 700 ಜನ ಮುಸ್ಲಿಮರು ಮಡಿದರೆ 252 ಜನ ಹಿಂದುಗಳೂ ಸತ್ತಿದ್ದಾರೆ. ಅಷ್ಟಕ್ಕೇ ಮೋದಿ ಕೋಮುವಾದಿಯಾಗುವುದಾದರೆ ಅಯೋಧ್ಯೆ ಗಲಾಟೆಯಲ್ಲಿ 2 ಸಾವಿರಕ್ಕೂ ಹೆಚ್ಚು ಹಿಂದು-ಮುಸ್ಲಿಮರು ಮಡಿದಿದ್ದಾರೆ. ಅದಕ್ಕೆ ಕಾರಣೀಭೂತರಾದ ಆಡ್ವಾಣಿ ಹೇಗೆ ನಿಮ್ಮ ಕಣ್ಣಿಗೆ ಸೆಕ್ಯುಲರ್ ಆಗಿ ಕಂಡುಬಿಡುತ್ತಾರೆ? ಈ ಮಧ್ಯೆ, ಜೂನ್ 18ರಂದು "ನಿತೀಶ್ ಕುಮಾರ್ ಒಬ್ಬ ಸೆಕ್ಯುಲರ್ ನಾಯಕ" ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ ಕೂಡಲೇ, ನಿತೀಶ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ! 1983ರಲ್ಲಿ ಅಸ್ಸಾಂನ ನೆಲ್ಲಿಯಲ್ಲಿ 3,300 ಮುಸಲ್ಮಾನರನ್ನು ಹತ್ಯೆಗೈದ, 1984ರಲ್ಲಿ ದಿಲ್ಲಿಯಲ್ಲಿ 3,500 ಸಿಖ್ಖರನ್ನು ಹತ್ಯೆ ಮಾಡಿದ ಕಾಂಗ್ರೆಸ್ ಪಕ್ಷ ಕೂಡ ಇವರ ಪ್ರಕಾರ ಸೆಕ್ಯುಲರ್ ಹಾಗೂ ಸೆಕ್ಯುಲರ್ ಸರ್ಟಿಫಿಕೆಟ್‌ಗಳನ್ನು ನೀಡಬಹುದು ಎಂದರ್ಥವೇ? 1969ರಲ್ಲಿ ಗುಜರಾತ್‌ನಲ್ಲೇ ಕಾಂಗ್ರೆಸ್‌ನ ಹಿತೇಂದ್ರ ದೇಸಾಯಿ ಆಡಳಿತದಲ್ಲಿ ಹಿಂದು-ಮುಸ್ಲಿಂ ಘರ್ಷಣೆಯಲ್ಲಿ 2 ಸಾವಿರ ಜನರು ಹತ್ಯೆಯಾಗಿದ್ದರು. ಆದರೂ ಕಾಂಗ್ರೆಸ್ ಕೋಮುವಾದಿಯಾಗಲಿಲ್ಲ! ಹೇಗಿದೆ ನೋಡಿ ಭಾರತದ ಸೆಕ್ಯುಲರ್ ವಾದ?!
ಇದೆಲ್ಲಕ್ಕೂ ಮಿಗಿಲಾಗಿ, ಟೋಪಿ, ತಿಲಕ ಇಟ್ಟುಕೊಳ್ಳುವಂಥ ಸಾಂಕೇತಿಕ ಅಥವಾ ಕಾಟಾಚಾರದ ಕೆಲಸಗಳಿಂದ ಯಾವ ಪ್ರಯೋಜನವಿದೆ ಹೇಳಿ?
ಬಹುಶಃ ನಿಮ್ಮ ಪ್ರಕಾರ ಮುಸಲ್ಮಾನರಿಗೆ ಟೋಪಿಯನ್ನೂ(ಮೋಸ) ಹಾಕಬೇಕಾಗುತ್ತದೆ, ಹಿಂದುಗಳಿಗೆ ನಾಮವನ್ನೂ(ಮೋಸ) ಎಳೆಯಬೇಕಾಗುತ್ತದೆ ಎಂದರ್ಥವೇ ನಿತೀಶ್ ಕುಮಾರ್?! ಇಲ್ಲವಾದರೆ ಇಫ್ತಾರ್ ಕೂಟಗಳಿಗೆ ಹೋಗಿ ಅಥವಾ ಏರ್ಪಡಿಸಿ ಟೋಪಿ ಹಾಕಿಕೊಳ್ಳುವುದರಿಂದ, ತಿಲಕ ಇಟ್ಟುಕೊಳ್ಳುವುದರಿಂದ ಯಾವ ಸಾಧನೆಯಾಗುತ್ತದೆ ಸ್ವಾಮಿ? ಧರ್ಮವೆನ್ನುವುದು ವೈಯಕ್ತಿಕ ಆಯ್ಕೆ, ನಂಬಿಕೆ ಎಂದ ಮೇಲೆ ಅನ್ಯ ಧರ್ಮದವರ ಟೋಪಿ, ಕ್ರಾಸ್ ಧರಿಸಿಕೊಂಡು ಸೆಕ್ಯುಲರ್ ಎಂದು ತೋರಿಸಿಕೊಳ್ಳಬೇಕಾದ ಅಗತ್ಯ ಎಲ್ಲಿಂದ ಬಂತು?
ಇಂಥ ಸಾಂಕೇತಿಕ ಸೆಕ್ಯುಲರಿಸಂನಿಂದ ಮುಸಲ್ಮಾನರಾಗಲಿ, ಮತ್ತಾವುದೇ ಧರ್ಮದವರಾಗಲಿ ಶ್ರೇಯೋಭಿವೃದ್ಧಿಯಾಗಲು ಸಾಧ್ಯವಿದೆಯೇ?MY(ಮುಸ್ಲಿಂ-ಯಾದವ್) ಎಂಬ ಸೂತ್ರದೊಂದಿಗೆ ಅಧಿಕಾರಕ್ಕೆ ಬಂದು 15 ವರ್ಷ ಬಿಹಾರವನ್ನಾಳಿದ ಲಾಲು ಪ್ರಸಾದ್ ಯಾದವ್ ಮುಸಲ್ಮಾನರನ್ನು ಉದ್ಧಾರ ಮಾಡಿದರೇ? ಇವತ್ತು ಸೆಕ್ಯುಲರಿಸಂ ಎಂಬುದು ಎಂತಹ ಪುಕ್ಕಟೆ, ಅಗ್ಗದ ಪದವೆಂದರೆ ಮಾಯಾವತಿ, ಮನಮೋಹನ್ ಸಿಂಗ್ ಕೂಡ ಸೆಕ್ಯುಲರ್ - ನಾನ್ ಸೆಕ್ಯುಲರ್ ಸರ್ಟಿಫಿಕೆಟ್ ಕೊಡುತ್ತಾರೆ. 2009ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಯು ಅನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಯತ್ನಿಸಿ ಕಾಂಗ್ರೆಸ್ ವಿಫಲವಾದ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸಾರ್ವಜನಿಕ ಸಭೆಯಲ್ಲಿ 'I doubt Nitish's secular credentials'' ಎಂದಿದ್ದರು. ಅದೇ ಮನಮೋಹನ್ ಸಿಂಗ್, ಜೆಡಿಯು ಬಿಜೆಪಿಯಿಂದ ಪ್ರತ್ಯೇಕಗೊಂಡ ಮರುಕ್ಷಣವೇ "Nitish is a secular leader'' ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಈ ಮನಮೋಹನ್ ಸಿಂಗ್ ಎಂತಹ ಇಬ್ಬಂದಿ ನಿಲುವಿನ ಮನುಷ್ಯರೆಂದರೆ, ಇವರ ಪ್ರಕಾರ ಸಿಖ್ಖರನ್ನು ಸಾಯಿಸಿದರೆ ಕೋಮುವಾದವಾಗುವುದಿಲ್ಲವೆ? ನೆಲ್ಲಿಯಲ್ಲಿ ಮುಸ್ಲಿಮರನ್ನು ದಿಲ್ಲಿಯಲ್ಲಿ ಸಿಖ್ಖರನ್ನು ಸಾಯಿಸಿದ ಕಾಂಗ್ರೆಸ್ ಕೋಮುವಾದಿಯಲ್ಲವೇ?!
ಬಾಬರಿ ಮಸೀದಿ ನೆಲಸಮವಾದ ಮೂರು ವರ್ಷಗಳೊಳಗೇ ಬಿಜೆಪಿ ಬೆಂಬಲ ಪಡೆದು ಮೊದಲ ಬಾರಿಗೆ ಮುಖ್ಯಮಂತ್ರಿಯಾದ, ಮತ್ತೆರಡು ಬಾರಿಯೂ ಬಿಜೆಪಿ ಬೆಂಬಲ ಪಡೆದೇ ಮುಖ್ಯಮಂತ್ರಿಗಾದಿಗೇರಿದ ಕುಮಾರಿ ಮಾಯಾವತಿ ಕೂಡ ಇಂದು ಸೆಕ್ಯುಲರ್ - ಕಮ್ಯುನಲ್ ಸರ್ಟಿಫಿಕೆಟ್ ಕೊಡುತ್ತಾರೆ! ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಬೇರೊಂದಿದೆಯೇ? ಜಾತ್ಯತೀತತೆಗಿಂತ ಅನುಕೂಲಸಿಂಧು ಪದ ಇನ್ನೊಂದಿದೆಯೇ?
ಈ ನಿತೀಶ್ ಕುಮಾರ್ ಕೂಡಾ ಒಬ್ಬ ಪಕ್ಕಾ ಅವಕಾಶವಾದಿಯೇ.
ಇವತ್ತು ಕೋಮುವಾದ, ಸೆಕ್ಯುಲರ್ ವಾದಗಳು ಅವಕಾಶವಾದದ ದಾಳಗಳು ಮಾತ್ರ. 1996ರಲ್ಲಿ ಜೆಡಿಯುನ ಪೂರ್ವ ಅವತಾರವಾದ ಸಮತಾ ಪಕ್ಷದ ಜತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವಾಗ ಬಿಹಾರ ವಿಧಾನಸಭೆಯಲ್ಲಿ ಸಮತಾ ಪಕ್ಷ 7 ಹಾಗೂ ಬಿಜೆಪಿ 42 ಸೀಟುಗಳನ್ನು ಹೊಂದಿತ್ತು. 2000ರಲ್ಲಿ ನಿತೀಶ್ ಕುಮಾರ್ ಮೊದಲ ಬಾರಿಗೆ ಅಲ್ಪಾವಧಿಗೆ ಮುಖ್ಯಮಂತ್ರಿಯಾದಾಗಲೂ ಬಿಜೆಪಿಯೇ ಹೆಚ್ಚು ಸ್ಥಾನಗಳನ್ನು ಹೊಂದಿತ್ತು. ಇಂದು ಕಾಂಗ್ರೆಸ್ ಸಹಾಯದಿಂದ ಸರ್ಕಾರ ಉಳಿಸಿಕೊಳ್ಳುವ ಸ್ಥಿತಿಯನ್ನು ತಲುಪಿದ್ದಾರೆಂಬ ಏಕಮಾತ್ರ ಕಾರಣಕ್ಕೆ ನಿತೀಶ್ ಕುಮಾರ್ ಸೆಕ್ಯುಲರ್ ದಾಳವನ್ನು ಹಾಕುತ್ತಿರುವುದು ಅವಕಾಶವಾದವಲ್ಲದೆ ಮತ್ತೇನು? ನಿತೀಶ್ ಕುಮಾರ್ ಇಷ್ಟೆಲ್ಲಾ ಮಾಡುತ್ತಿರುವುದು ವೈಯಕ್ತಿಕ ಆಸೆಯಿಂದ ಹಾಗೂ ಬಿಜೆಪಿಯ ಹಿರಿತಲೆ ಲಾಲ್ ಕೃಷ್ಣ ಆಡ್ವಾಣಿಯವರ ಚಪಲಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಇಲ್ಲವಾದರೆ ಆಡ್ವಾಣಿಯವರು ನೇತಾರರಾದರೆ ನಾವು ಬೆಂಬಲಿಸಬಹುದು ಎಂದು ಜೆಡಿಯುನ ಶರದ್ ಯಾದವ್ ಹೇಳಿರುವುದರ ಅರ್ಥವೇನು? ಅದಿರಲಿ, ಬಿಜೆಪಿಯಲ್ಲಿ ಹಿರಿಯರಿಗೆ ಬೆಲೆ ಕೊಡುತ್ತಿಲ್ಲ ಎನ್ನುತ್ತಿದ್ದರಲ್ಲಾ ಈ ನಿತೀಶ್ ಕುಮಾರ್, ತಮ್ಮ ಪಕ್ಷದ ಸಂಸ್ಥಾಪಕ ಜಾರ್ಜ್ ಫರ್ನಾಂಡಿಸ್‌ಗೆ ಯಾವ ಬೆಲೆ ಕೊಟ್ಟಿದ್ದರು? ಜಾರ್ಜ್‌ರನ್ನು ಪಕ್ಷದಿಂದಲೇ ಹೊರಹಾಕುವಾಗ ಹಿರಿತನ, ಶ್ರಮ ನೆನಪಾಗಿರಲಿಲ್ಲವೆ? ಪ್ರಸ್ತುತ ನಡೆಯುತ್ತಿರುವ ಪ್ರಹಸನದ ಹಿಂದಿರುವುದು ನಿತೀಶ್ ಕುಮಾರ್ ಹಾಗೂ ಲಾಲ್ ಕೃಷ್ಣ ಆಡ್ವಾಣಿಯವರ ಅಧಿಕಾರದ ಚಪಲವೇ ಹೊರತು ಮತ್ತೀನ್ನೇನೂ ಅಲ್ಲ. ಅನಾರೋಗ್ಯದ ನೆಪದಲ್ಲಿ ಮೊದಲಿಗೆ ಗೋವಾ ಕಾರ್ಯಕಾರಣಿಗೆ ಚಕ್ಕರ್ ಹೊಡೆದ, ಮೊನ್ನೆ ಬುಧವಾರ ಅದೇ ನೆಪ ತೆಗೆದು ಆರೆಸ್ಸೆಸ್ ಸಂಘಚಾಲಕರಾದ ಭಾಗವತರ ಭೇಟಿಯನ್ನು ಮುಂದುಹಾಕಿದ ಆಡ್ವಾಣಿ, ತಮ್ಮ ಚೇಲಾಗಳಾದ ಸುಷ್ಮಾ, ವೆಂಕಯ್ಯ, ಕುಮಾರ ಹಾಗೂ ದಪ್ಪಮಂಡೆಯ ಮತ್ತು ಸಪ್ಪೆ ಮಾತಿನ ಸಲಹೆಗಾರ ಸುಧೀಂದ್ರ ಕುಲಕರ್ಣಿಯವರಿಂದ ಮರುಳಾಗಿದ್ದಾರೆ ಅಷ್ಟೇ. ಆಡ್ವಾಣಿಯವರ ಹಿರಿತನಕ್ಕೆ ಬೆಲೆ ಕೊಡಬೇಕು. ಅವರ ಕೊಡುಗೆಯನ್ನು ಮರೆಯಬಾರದು ನಿಜ. ಆದರೆ ನೀವೇ ಹೇಳಿ, ಪ್ರಾಯಕ್ಕೆ ಬಂದ ಮಗನಿಗೆ ಮದುವೆ ಮಾಡಬೇಕಾ ಅಥವಾ ಅಪ್ಪನ ಮೈಯಲ್ಲಿ ಇನ್ನೂ ತೀಟೆ ಇದೆ ಅಂತ ಆತನಿಗೇ ಹೊಸ ಹೆಂಡತಿಯನ್ನು ಹುಡುಕಬೇಕಾ?! ಇವತ್ತು ಸೆಕ್ಯುಲರಿಸಂ, ಟೋಪಿ, ತಿಲಕದ ಹೆಸರಿನಲ್ಲಿ ನಡೆಯುತ್ತಿರುವುದು ಇಂತಹ ತೀಟೆ, ಅವಕಾಶವಾದವೇ ಹೊರತು ದೇಶದ, ಮುಸ್ಲಿಮರ ಬಗೆಗಿನ ಪ್ರೀತಿಯ ಅನಾವರಣವಲ್ಲ.
ಕೊನೆಯದಾಗಿ ಹೇಳುವುದೇನೆಂದರೆ, ಸಾಂಕೇತಿಕ ಕ್ರಮಗಳಿಂದ, ತೋರಿಕೆಗಳಿಂದ ಮುಸಲ್ಮಾನರಿಗಾಗಲಿ ಅಥವಾ ಇನ್ನುಳಿದ ಅಲ್ಪಸಂಖ್ಯಾತರಿಗಾಗಲಿ ಅಥವಾ ಬಹುಸಂಖ್ಯಾತ ಹಿಂದುಗಳಿಗಾಗಲಿ ಯಾವುದೇ ಲಾಭವಿಲ್ಲ. ನಿಜವಾದ ಕೋಮು ಸೌಹಾರ್ದತೆ ಸೃಷ್ಟಿಯಾಗಬೇಕಾದರೆ ದಲಿತ, ಹಿಂದುಳಿದ, ಮುಸಲ್ಮಾನ ಎಲ್ಲರಿಗೂ ಸಮಾನ ಶಿಕ್ಷಣ, ಆರೋಗ್ಯ ವ್ಯವಸ್ಥೆಗಳು ಲಭ್ಯವಾಗಬೇಕು. ಕುಟುಂಬ ವ್ಯವಸ್ಥೆಯ ಅಗತ್ಯದ ಬಗ್ಗೆ ಮುಖ್ಯವಾಗಿ ಮುಸಲ್ಮಾನರಿಗೆ ಹಾಗೂ ಹಿಂದುಳಿದ ಹಿಂದುಗಳಲ್ಲೂ ಜಾಗೃತಿ ಮೂಡಿಸಬೇಕು. ಮಕ್ಕಳನ್ನು ಹುಟ್ಟಿಸುವ ಮೊದಲು ಅವುಗಳಿಗೆ ಎಷ್ಟರಮಟ್ಟಿನ ವಿದ್ಯೆ, ಸೌಲಭ್ಯಗಳನ್ನು ಕಲ್ಪಿಸಲು ತಮ್ಮಿಂದ ಸಾಧ್ಯವಾಗುತ್ತದೆ ಎಂಬುದನ್ನು ಪೋಷಕರೂ ಯೋಚಿಸುವಂತಾಗಬೇಕು. ಮುಸ್ಲಿಮರ ಸ್ಥಿತಿ ದಲಿತರಿಗಿಂತ ಹೀನಾಯವಾಗಿದೆ ಎಂದರೆ ಸಾಲದು. ಏಕೆಂದರೆ ಸರ್ಕಾರಕ್ಕಿಂತ ಹೆಚ್ಚಿನ ಜವಾಬ್ದಾರಿ ಜನ್ಮ ನೀಡುವ ತಂದೆ-ತಾಯಿಗಳದ್ದಾಗಿರುತ್ತದೆ. ಶಿಕ್ಷಣದಿಂದಾಗಿ ಇವತ್ತು ಮಧ್ಯಮ ಮತ್ತು ಶ್ರೀಮಂತ ವರ್ಗದ ಮುಸಲ್ಮಾನರಲ್ಲಿ ಕಟ್ಟರ್ ಪಂಥೀಯತೆ ಇಲ್ಲ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ, ಎಲ್ಲರಿಗೂ ಸಮಾನ ಕಲಿಕಾ ಹಾಗೂ ಉದ್ಯೋಗಾವಕಾಶ ಲಭ್ಯವಾದರೆ ಪ್ರತ್ಯೇಕ ದಲಿತ ಕಾಲೋನಿ, ಮುಸ್ಲಿಂ ಮೊಹಲ್ಲಾಗಳು ಮರೆಯಾಗಿ ಎಲ್ಲರೂ ಬೆರತು ಬಾಳುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಅಂತಹ ಪರಿಸ್ಥಿತಿ ನಿರ್ಮಾಣವಾಗಬೇಕಾದರೆ, "Development for all and appeasement of none'' ಎನ್ನುವ ನಾಯಕ ಹೊರಹೊಮ್ಮಬೇಕು. ಹಾಗನ್ನುತ್ತಿರುವ ನಾಯಕ ಯಾರೆಂದು ಗೊತ್ತಲ್ಲವೆ?!

- ಪ್ರತಾಪ್ ಸಿಂಹ
mepratap@gmail.co
m

Comments

Popular posts from this blog

ಪ್ರಧಾನಿ ಮೋದಿಜೀ ಪ್ರಣಬ್ ಮುಖರ್ಜಿಯವರಿಗೆ ಬರೆದ ಪತ್ರ