ಟೈಗರ್ ಹಿಲ್ಸ್ ಗೆದ್ದ ಟೈಗರ್ಗಳಿಗೆ ನಮನ
Thanks To News13. http://news13.in/2013/07/34450/ ಕಾರ್ಗಿಲ್ ಕದನ. ಅದೊಂದು ಭಾರತದ ಇತಿಹಾಸದಲ್ಲಿ ಮರೆಯಲಾರದ ಯುದ್ಧ. ಭಾರತ-ಪಾಕಿಸ್ತಾನಗಳ ನಡುವೆ ನಡೆದ ನಾಲ್ಕನೇ ಯುದ್ಧ. ಉಭಯ ದೇಶಗಳ ನಡುವೆ ಸುಧಾರಿಸಲಾರದಷ್ಟು ಸಂಬಂಧ ಹಳಸಿದೆ ಎನ್ನುವುದಕ್ಕೆ ಈ ಯುದ್ಧಗಳು ನಿದರ್ಶನ. ಮುಂದಿನ ಪೀಳಿಗೆ ನಮ್ಮ ಚರಿತ್ರೆಯ ಪುಟಗಳನ್ನು ತಿರುವಿ ಈ ಯುದ್ಧದ ವಿವರಗಳನ್ನು ತಿಳಿದುಕೊಳ್ಳಲು ಆಸಕ್ತಿ ತೋರಬಹುದು. ಏಕೆಂದರೆ ಈ ಯುದ್ಧ ಅಷ್ಟು ರೋಚಕವಾಗಿತ್ತು. ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿರುವ ಕಾರ್ಗಿಲ್ ಈ ಹಿಂದೆ ಒಂದು ಜಿಲ್ಲಾಕೇಂದ್ರದ ಹೆಸರಾಗಿ ಉಳಿದಿತ್ತು. ದೇಶವಾಸಿಗಳಿಗೆ ಆ ಹೆಸರು ಅಷ್ಟೇನೂ ಪರಿಚಿತವಾಗಿರಲಿಲ್ಲ. ಆದರೆ ಈಗ ಕಾರ್ಗಿಲ್ ಎಂದ ಕೂಡಲೇ ದೇಶವಾಸಿಗಳ ನರನಾಡಿಗಳಲ್ಲಿ ಅದೇನೋ ಅವ್ಯಕ್ತ ಭಾವನೆಗಳ ಸಂಚಾರವಾಗುತ್ತದೆ. ಹಲವು ತೆರನಾದ ಭಾವನೆಗಳು ಉಕ್ಕಿ ಹರಿಯುತ್ತವೆ. ವಂಚನೆ, ಉದ್ವಿಗ್ನತೆ, ಕೋಪ, ದುಃಖ, ನಿರ್ಧಾರ, ಸಾಹಸ, ಪರಾಕ್ರಮ, ವಿಜಯ, ಸಂಭ್ರಮ – ಹೀಗೆ ಹತ್ತು ಹಲವು ಭಾವನೆಗಳು ಅನುರಣಿಸುತ್ತವೆ. 1999 ರ ಮೇ 8 ರಿಂದ ಜುಲೈ 14 ರವರೆಗೆ ನಡೆದ ಆ 74 ದಿನಗಳು, ದೇಶಾದ್ಯಂತ ಪೂರ್ತಿ ಕಾರ್ಗಿಲ್ ಯುದ್ಧದ್ದೇ ಸುದ್ದಿ. ಮಾಧ್ಯಮಗಳಲ್ಲಿ, ಟಿವಿ ಚಾನೆಲ್ಗಳಲ್ಲಿ ಯುದ್ಧದ ಸುದ್ದಿಗಳಿಗೇ ಆದ್ಯತೆ. ಉಳಿದೆಲ್ಲ ಕಾರ್ಯಕ್ರಮಗಳು ಮೂಲೆಗೆ. ಏನಾಯಿತು ಕಾರ್ಗಿಲ್ನಲ್ಲಿ ? ಇವತ್ತು ಪಾಕ್ ಶತ್ರುಗಳೆಷ್ಟು ಮಂದಿ ಸತ್ತರು ? ಭಾರ...